ಶ್ರಾವಣ ಮಾಸದ ಪೂರ್ಣಿಮೆ ಹಿಂದಿನ ಶುಕ್ರವಾರ ವರಮಹಾಲಕ್ಷ್ಮೀ ವ್ರತ. ಒಂದೊಮ್ಮೆ ಶುಕ್ರವಾರ ಹುಣ್ಣಿಕೆ ಬಂದರೆ ಅಂದೇ ವರಮಹಾಲಕ್ಷ್ಮೀ ವ್ರತ. ಈ ಶುಕ್ರವಾರಕ್ಕೆ ’ಸಂಪತ್ ಶುಕ್ರವಾರ’ ಎಂಬ ಹೆಸರೂ ಇದೆ.
’ಲಕ್ಷ್ಮೀ’ ಎಂಬ ಶಬ್ದಕ್ಕೆ ಎಲ್ಲವನ್ನು ಯಾವಾಗಲೂ ನೋಡುತ್ತಿರುವವಳು ಎಂದರ್ಥ. ಸರ್ವಸಾಕ್ಷಿಯಾಗಿರುವ ಭಗವಂತನೊಡನೆ ನಿತ್ಯಯೋಗವನ್ನು ಹೊಂದಿ ಸರ್ವಜ್ಞಳಾಗಿರುವಾಕೆಯೇ ’ಲಕ್ಷ್ಮೀ’. ಲಕ್ಷ್ಮೀ ಸಂಪತ್ತಿನ ಅಧಿದೇವತೆ. ಅವಳ ಅನುಗ್ರಹವಾದರೆ ಮನೆಯಲ್ಲಿ ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ, ಸೌಭಾಗ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವಿದ್ಯಾಲಕ್ಷ್ಮೀ, ವಿಜಯಲಕ್ಷ್ಮೀ, ಕೀರ್ತಿಲಕ್ಷ್ಮೀ, ಮೋಕ್ಷ ಲಕ್ಷ್ಮೀ ಎಲ್ಲವೂ ನೆಲೆಸುತ್ತವೆ. ಆದ್ದರಿಂದ ಸಿರಿ ಸೌಭಾಗ್ಯ ಸಂಪದಭಿವೃದ್ಧಿಗಾಗಿ ಸುಮಂಗಲಿಯರು, ಪುರುಷರು, ಈ ವ್ರತವನ್ನು ಆಚರಿಸುತ್ತಾರೆ.
ಈ ವತ್ರವನ್ನು ಆಚರಿಸುವವರು ಹನ್ನೆರಡು ತಂತುಗಳಿಂದ ಮಾಡಿದ, ಹನ್ನೆರಡೂ ಗಂಟುಗಳಿಂದ ಕೂಡಿದ, ಲಕ್ಷ್ಮೀದಾರವನ್ನು ಬಲಹಸ್ತಕ್ಕೆ ಕಟ್ಟಿಕೊಂಡು, ಶ್ರದ್ಧಾರಭಕ್ತಿಗಳಿಂದ ಪೂಜಿಸಬೇಕು. ಹನ್ನೆರಡು ಎಂಬುದು ವಾಸುದೇವನಿಗೆ ಪ್ರಿಯವಾದ ಒಂದು ಶಕ್ತಿಪೂರ್ಣವಾದ ರಹಸ್ಯ ಸಂಖ್ಯೆ. ದ್ವಾದಶಾತ್ಮಕನಾದ ಭಗವಂತನ ಪರಾಶಕ್ತಿಯಾಗಿ ಆತನೊಡನೆ ಸದಾ ಸರ್ವತ್ರಯೋಗವನ್ನು ಹೊಂದಿರುವ ಶ್ರೀ ವರಮಹಾಲಕ್ಷ್ಮೀ ದೇವಿಯೂ ದ್ವಾದಶಾತ್ಮಕಳಾಗಿ (೧೨) ದ್ವಾದಶ ತಂತುಗ್ರಂಥಿಗಳಲ್ಲಿ ದ್ವಾದಶನಾಮಾವಲೀ ಪೂಜೆಯನ್ನು ಸ್ವೀಕರಿಸುತ್ತಾಳೆ.
ಅಭ್ಯಂಜನ ಸ್ನಾನಮಾಡಿ, ಶುಭ್ರ ವಸ್ತ್ರವನ್ನು ಧರಿಸಿ, ಆಹ್ನಿಕಗಳನ್ನು ಪೂರೈಸಿ, ಸಾರಿಸಿ ರಂಗವಲ್ಲಿಯಿಟ್ಟ ದಿವ್ಯ ಮಂಟಪದಲ್ಲಿ, ಪಂಚವರ್ಣಗಳಿಂದ ಕೂಡಿದ, ಅಷ್ಟದಳ ಪದ್ಮವನ್ನು ರಚಿಸಿ, ಕಲಶವನ್ನಿಟ್ಟು ಅದರಲ್ಲಿ ವರಮಹಾಲಕ್ಷ್ಮೀಯನ್ನು ಆವಾಹಿಸಿ, ಪ್ರಾಣಪ್ರತಿಷ್ಟೆ, ಶ್ರೀಸೂಕ್ತ ವಿಧಾನದಿಂದ ಕಲ್ಪೋಕ್ತ ಷೋಡಶೋಪಚಾರ ಪೂಜೆಸಲ್ಲಿಸಿ, ನಾನಾ ವಿಧವಾದ ಭಕ್ಷ ಭೋಜ್ಯಗಳನ್ನು ತಾಯಿಗೆ ಅರ್ಪಿಸಿ ಪ್ರಾರ್ಥಿಸಬೇಕು.
ಭವಿಷ್ಯೋತ್ತರ ಪುರಾಣದಲ್ಲಿ ಲೋಕಾನುಗ್ರಹಕ್ಕಾಗಿ ಈಶ್ವರನು ಪಾರ್ವತಿಗೆ ವಿವರಿಸಿದ ವ್ರತವೇ ವರಮಹಾಲಕ್ಷ್ಮೀ ವ್ರತ.
ಸಂಸ್ಕೃತ ವೈದಿಕ ಸಾಹಿತ್ಯದಲ್ಲಿ ಲಕ್ಷ್ಮೀಯನ್ನು ಸೌಂದರ್ಯ, ಸಂಪತ್ತು, ವಿಜಯ, ಯಶಸ್ಸು ಮುಂತಾದ ಎಲ್ಲಾ ಸದ್ಗುಣ ಹಾಗೂ ಲೌಕಿಕ ಭಾಗ್ಯಗಳ ಅಧಿದೇವತೆಯೆಂದು ಸ್ತುತಿಸಲಾಗಿದೆ. ಪದ್ಮಪುರಾಣದಲ್ಲಿ ”ಲಕ್ಷ್ಮೀ ವಿಷ್ಣುವಿನ ಶಕ್ತಿಯಾಗಿ ಅವನಲ್ಲಿರುವ ಶ್ರೀ, ಭೂ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ತುಷ್ಟಿಪುಷ್ಠಿಗಳ ಪ್ರತೀಕವಾಗಿದ್ದಾಳೆ”, ಎಂದು ಹೇಳಿದೆ. ಹೀಗೆ ಲಕ್ಷ್ಮೀ ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಪ್ರಧಾನ ದೇವತೆಯಾಗಿ, ಎಲ್ಲ ಆಸ್ತಿಕರ ಮನ ಮನೆಗಳಲ್ಲಿ ನೆಲೆಸಿದ್ದಾಳೆ. ಅಂತಹ ಲಕ್ಷ್ಮೀಯನ್ನು ಆರಾಧಿಸಿ, ಮನೆಯಲ್ಲಿ ಧನ, ಕನಕ ಐಶ್ವರ್ಯಾದಿಗಳು ಸದಾ ನೆಲೆಸುವಂತೆ ಬೇಡಿಕೊಳ್ಳುವುದೇ ವರಮಹಾಲಕ್ಷ್ಮೀ ವ್ರತದ ಅಂತರಂಗವೆನ್ನಬಹುದು.
ಸಂಗ್ರಹ:http://Habba mattu Dinachari pustaka
|