|
ದಾವಣಗೆರೆ: ಆಧುನಿಕ ಕಾಲದಲ್ಲಿಯೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಇಂದು ಭೇದ ಭಾವ ತಾಂಡವವಾಡುತ್ತಿದೆ ಎಂದು ಕುವಿವಿ ರಾಸೇಯೋ ಯೋಜನಾಧಿಕಾರಿ ಡಾ. ರಂಗರಾಜ ವನದುರ್ಗ ವಿಷಾಧಿಸಿದ್ದಾರೆ.
ನಗರದಲ್ಲಿ ಸೋಮವಾರ ಬಿ.ಎ. ೫ನೇ ಸೆಮಿಸ್ಟರ್ ಪಠ್ಯಾಧಾರಿತ ಪ್ರೊ. ಗಂಗಾಧರ ಹಿರೇಮಠ ಬರೆದಿರುವ ’ಸಮಾಜ ಶಾಸ್ತ್ರ್ಈಯ ಚಿಂತನೆಯ ಮೂಲ ನೆಲೆಗಳು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಪ್ರಾಣಿ, ಸಸ್ಯ, ಲೋಹ, ಅಧಿಕಾರ, ಶಿಕ್ಷಣ, ಜಾತಿ, ಮತ ಧರ್ಮ ಸೇರಿದಂತೆ ಪ್ರತಿಯೊಂದರಲ್ಲೂ ಭೇದಭಾವ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಆಧುನಿಕ ಸಮಾಜ ಆದರ್ಶಪ್ರಾಯವಾಗಿಲ್ಲ ಎಂದು ಅವರು ಹೇಳಿದರು.
ಸಮಾಜ ಶಾಸ್ತ್ರವಿಭಾಗದ ವಿದ್ಯಾರ್ಥಿಗಳೂ ಸಮಾಜದಲ್ಲಿ ಬೇರೂರಿರುವ ಭೇದ ಭಾವ ನಿರ್ಮೂಲನೆಯತ್ತ ಚಿಂತನೆ ನಡೆಸಬೇಕು. ಜಗತ್ತಿನಲ್ಲಿ ಪ್ರೀತಿ ಮತ್ತು ವಿಶ್ವಾಸ ಮಾತ್ರ ಉಳಿಯುತ್ತವೆ ಎಂದು ಅವರು ತಿಳಿಸಿದರು. ಪ್ರೀತಿ, ವಿಶ್ವಾಸಗಳು ಸಹ ವಿದ್ಯೆ ಹಾಗೂ ಹುದ್ದೆಗಳಿಂದ ಮಾತ್ರ ಉಳಿಯುತ್ತವೆ ಎಂಬ ಕಟುಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು. ಸಮಾಜಶಾಸ್ತ್ರಿ ಅಧ್ಯಯನ ವಿದ್ಯಾರ್ಥಿಗಳು ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪುಸ್ತಕ ಬರೆದವರು ಮತ್ತು ಓದುವವರು ಶಾಶ್ವತವಾಗಿರುವುದಿಲ್ಲ. ಆದರೆ, ಬರೆದ ಪುಸ್ತಕ ಮಾತ್ರ ಶಾಶ್ವತ. ಪ್ರೊ. ಗಂಗಾಧರಯ್ಯ ಹಿರೇಮಠ ಈ ಪುಸ್ತಕ ಬರೆಯುವ ಮೂಲಕ ತಮ್ಮನ್ನು ತಾವು ಕ್ರಿಯಾಶೀಲರನ್ನಾಗಿಸಿಕೊಂಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ಲೇಖಕ ಪ್ರೊ. ಗಂಗಾಧರಯ್ಯ ಹಿರೇಮಠ್, ಸಮಾಜದಲ್ಲಿ ಗಾಂಧಿ - ಬಸವ, ಬುದ್ಧ ಸೇರಿದಂತೆ ಅನೇಕ ಮಹಾನ್ ದಾರ್ಶನಿಕ ಚಿಂತನೆಗಳು ಇವೆ. ಆದರೆ, ಅವುಗಳನ್ನು ಜಾತಿ ಹಣೆಪಟ್ಟಿಯಲ್ಲಿ ಕಟ್ಟೀ ಹಾಕಿರುವುದರಿಂದ ಸಮಾಜದಲ್ಲಿ ಈಗಲೂ, ಬಡತನ, ಅಸ್ಪೃಶ್ಯತೆ ಸೇರಿದಂತೆ ಅನೇಕ ಸಮಸ್ಯೆಗಳ ಮೂಲೋತ್ಪಾಟನೆ ಆಗಿಲ್ಲ ಎಂದು ವಿಷಾದಿಸಿದರು.
ಸಂಗ್ರಹ:http://www.kannadaprabha.com
|