|
ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿಗೆ ಸ್ತ್ರೀವಾದಿ ಚಿಂತಕಿ ಡಾ. ವಿಜಯಾ ದಬ್ಬೆ ಅವರು ಆಯ್ಕೆಯಾಗಿದ್ದಾರೆ. ಶ್ರೀಮತಿ ಯಶೋದಾ ರೌಗೌ ಟ್ರಸ್ಟ್ ಮತ್ತು ಸಂವಹನ ಪ್ರಕಾಶನ ಸಂಯುಕ್ತವಾಗಿ ಜು. ೨೪ ರ ಸಂಜೆ ೫.೩೦ ಕ್ಕೆ ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿವೆ ಎಂದು ವಿಮರ್ಶಕ ಪ್ರೊ ಶಿವರಾಮ ಕಾಡನಕುಪ್ಪೆ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ ಸಿ.ಎಸ್. ಪುಟ್ಟರಾಜು ಅವರು ಪ್ರಶಸ್ತಿ ಪ್ರದಾನ ಮಾಡುವರು. ’ಮಹಿಳಾ ಅಧ್ಯಯನದ ಆಯಾಮಗಳು’ ಎಂಬ ಹತ್ತು ವರ್ಷಗಳ ಉಪನ್ಯಾಸಗಳ ಸಮಗ್ರ ಸಂಪುಟವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಬಿಡುಗಡೆಗೊಳಿಸುವರು. ಅನುವಾದ ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ತ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ಕವಿತಾ ಸ್ಮಾರಕವಾಗಿ ಮಹಿಳೆ ಮತ್ತು ಸಾಹಿತ್ಯ ಕುರಿತು ಸ್ತ್ರಿವಾದಿ ಚಿಂತಕಿ ಡಾ. ಬಿ.ಎನ್. ಸುಮಿತ್ರಾಬಾಯಿ ಅವರು ಉಪನ್ಯಾಸ ನೀಡುವರು ಎಂದರು.
ವಿವಿಧೆಡೆ ಸೇವೆ: ಡಾ. ವಿಜಯಾ ದಬ್ಬೆ ಅವರದು ಬಹುಮುಖ ವ್ಯಕ್ತಿತ್ವ. ಎರಡೂವರೆ ದಶಕಗಳ ಕಾಲ ಕ್ರಿಯಾಶೀಲ ಬರವಣಿಗೆಯಿಂದ ಖ್ಯಾತಿ ಗಳಿಸಿದವರು. ಸೃಜನಶೀಲ ಲೇಖಕಿ, ವಿಮರ್ಶಕಿ, ಸ್ತ್ರೀವಾದಿ ಚಿಂತಕಿ, ಹೋರಾಟಗಾರ್ತಿಯಾಗಿ ಅನನ್ಯತೆ ಮೆರೆದವರು. ಮಹಿಳಾ ಸಾಹಿತ್ಯ, ಸ್ತ್ರೀವಾದಿ, ವಿಮರ್ಶೆ ಹಾಗೂ ಮಹಿಳಾ ಚಳವಳಿಗಳನ್ನು ಅವರ ಬದುಕಿನ ಭಾಗವಾಗಿ ಮಾಡಿಕೊಂಡವರು ಎಂದು ಅವರು ತಿಳಿಸಿದರು. ಮೈಸೂರು ವಿವಿ ಶೈಕ್ಷಣಿಕ ಸಮಿತಿ ಸದಸ್ಯರಾಗಿ, ಹಂಪಿ ವಿವಿ ಮಹಿಳಾ ಅಧ್ಯಯನ ವಿಭಾಗ ಸದಸ್ಯರಾಗಿ, ಚಲನಚಿತ್ರ ಮಂಡಲಿಯ ಆಯ್ಕೆ ಸಮಿತಿ ಸದಸ್ಯರಾಗಿ ಡಾ. ವಿಜಾಯ ದಬ್ಬೆ ಅವರು ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಡಾ. ವಿಜಯಾ ದಬ್ಬೆ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ, ಸಮೋದಿತ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂದೇಶ ಪ್ರಶಸ್ತಿಗಳು ಸಂದಿವೆ ಎಂದು ವಿವರಿಸಿದರು.
ಹಿರಿಯ ಸಾಹಿತಿ ಡಾ. ಸಿಪಿಕೆ, ಡಾ. ಉಷಾರಾಣಿ, ಪ್ರೊ. ರಾಮೇಗೌಡ, ಕ್ಯಾತನಹಳ್ಳಿ ರಾಮಣ್ಣ ಇದ್ದರು.
ಸಂಗ್ರಹ: http://www.kannadaprabha.com
|