|
ಧಾರವಾಡ: ಕವಿ ಚನ್ನವೀರ ಕಣವಿ ಅವರಿಗೆ ಜಗಳ ಮಾಡುವ ಯೋಗ್ಯತೆ ಇಲ್ಲ. ಅವರು ಸ್ನೇಹ ಕೊಟ್ಟಾರೆಯೇ ಹೊರತು ವೈರತ್ವವನ್ನು ಅಲ್ಲ ಎಂದು ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಇಲ್ಲಿ, ೮೦ ತುಂಬಿದ ಕವಿ ಚನ್ನವೀರ ಕಣವಿ ಅವರ ವ್ಯಕ್ತಿತ್ವದ ವ್ಯಾಖ್ಯಾನ ಮಾಡಿದರು.
೮೦ ವರ್ಷಗಳನ್ನು ಯಾವುದೇ ಜಗಳವಿಲ್ಲದೆ ಪೂರೈಸಿದ್ದು ಸಮಾನ್ಯವಾದುದಲ್ಲ. ಅವರಿಗೆ ೮೦ ವರ್ಷಗಳಾಗಿದ್ದರೂ ಅವರ್ ಕಾವ್ಯಕ್ಕೆ ವೃದ್ಧಾಪ್ಯ ಎಂಬುದಿಲ್ಲ. ಅವರ ಕಾವ್ಯ ಚಿರಂತನವಾದದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಸೃಜನ ಚಿಂತನ ಬಳಗವು ಭಾನುವಾರ ೮೦ ವರ್ಷ ಪೂರೈಸಿ ೮೧ ನೇ ವರ್ಷಕ್ಕೆ ಕಾಲಿರಿಸಿದ ಕವಿ ಚನ್ನವೀರ ಕಣವಿ ಅವರ ಸಾಹಿತ್ಯಾಭಿನಂದನೆ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಪಾಟೀಲ್ ಪುಟ್ಟಪ್ಪ ಮಾತನಾಡಿದರು.
೯೦ ರಲ್ಲೂ ಸುಮಾರು ೬೦ ವರ್ಷದಿಂದ ಕಣವಿ ಅವರ್ ಸ್ನೇಹ ಸಂಪರ್ಕ ನನಗೆ ಲಭಿಸಿದೆ. ಕಣವಿ ಅವರಿಗೆ ೬೦ ತುಂಬಿದ ಸಮಾರಂಭದ ಅಧ್ಯಕ್ಷತೆಯನ್ನೂ ನಾನೇ ವಹಿಸಿದ್ದೆ. ೭೦ ರಲ್ಲೂ ನಾನೇ ಇದ್ದೆ. ಈಗ ೮೦ ನೇ ಸಮಾರಂಭಕ್ಕೂ ಅಧ್ಯಕ್ಷತೆಯನ್ನು ವಹಿಸಿದ್ದೇನೆ. ೯೦ ನೇ ವರ್ಷದ ಸಮಾರಂಭಕ್ಕೂ ಇರುವ ಆಸೆ ಇದೆ ಎಂದು ಹೇಳಿ ಪಾಟೀಲ್ ಪುಟ್ಟಪ್ಪ ಸಭೆಯಲ್ಲಿ ನಗೆಯ ಅಲೆ ಎಬ್ಬಿಸಿದರು.
ನಾಡ ಗೀತೆಯಲ್ಲಿ : ಕುವೆಂಪು ಅವರು ಬರೆದಿರುವ ನಾಡಗೀತೆಯಲ್ಲಿ ತೈಲಪ, ಹೊಯ್ಸಳರ ಬಗ್ಗೆ ಉಲ್ಲೇಖಿಸಿದ್ದಾರೆ. ದೊಡ್ಡ ರಾಜರಾದ ಚಾಲುಕ್ಯರನ್ನು ಬಿಟ್ಟಿದ್ದಾರೆ. ಹೀಗೆ ಅವರ ಆ ಕವಿತೆ ಬಗ್ಗೆ ನನಗೆ ಭಿನ್ನಾಭಿಪ್ರಾಯವಿದೆ. ವೈಯಕ್ತಿಕವಾಗಿ ಕುವೆಂಪು ಬಗೆಗೆ ಗೌರವವಿದೆ. ಕಣವಿ ಅವರ ವಿಶ್ವವಿನೂತನ ವಿದ್ಯಾಚೇತನ ಕವಿತೆಯೂ ನಾಡ ಗೀತೆಯಾಗಿದ್ದರೆ ಚನ್ನಾಗಿತ್ತು. ಆ ಗೀತೆಯನ್ನು ಕುವೆಂಪು ಅವರೂ ಮೆಚ್ಚಿದ್ದರು ಎಂದರು.
ಸ್ವಂತಿಕೆ ಮೆರೆದರು: ಸಾಹಿತ್ಯಾಭಿನಂದನೆ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಮಾತನಾಡಿ, ಕನ್ನಡದ ವಾರಸುದಾರರಾಗಿ ಕಣವಿ ಇದ್ದಾರೆ. ಅವರು ಸ್ವಂತಿಕೆ ಮೆರದ ಕವಿ. ವಿಶ್ವವಿನೂತನ ವಿದ್ಯಾಚೇತನ ಎಂಬ ಕಣವಿ ಅವರ ಕಾವ್ಯ ಕೇಳಿ ಕುವೆಂಪು ಅವರು ರೋಮಾಂಚನಗೊಂಡಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಪ್ರೊ.ಬಿ.ವಿ. ಗುಂಜೆಟ್ಟಿ ಸ್ವಾಗತಿಸಿದರು. ಸೃಜನಾ ಬಳಗದ ಸಂಚಾಲಕ ಡಾ. ಜಿ.ಎಂ ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರು. ವೀಣಾ ಕುಲಕರ್ಣೀ ನಿರೂಪಿಸಿದರು.
ಸಂಗ್ರಹ: http://www.kannadaprabha.com
|