|
ಮಧುಗಿರಿ: ಗ್ರಾಮಾಂತರ ಪ್ರದೇಶದ ಅಕ್ಷರ ವಂಚಿತ ಮಕ್ಕಳಿಗೆ ಅಕ್ಷರಜ್ಞಾನ ಪಡೆಯಲು ಪುಸ್ತಕಗಳಿಂದ ಮಾತ್ರ ಸಾಧ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೂ. ಎಸ್.ಜಿ.ಸಿದ್ದರಾಮಯ್ಯ ನುಡಿದರು.
ಅವರು ಬುಧವಾರ ಇಲ್ಲಿನ ಎಂ.ಎನ್. ಕೆ.ಸಮುದಾಯ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕರ ಹಾಗೂ ಸಾ. ಶಿ. ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಬರುವ ಪಾವಗಡ ಗಡಿ ಪ್ರದೇಶವನ್ನೊಳಗೊಂಡ ೧೦೦ ಕನ್ನಡ ಮಾಧ್ಯಮ ಶಾಲೆಗಳಿಗೆ ಉಚಿತ ಪುಸ್ತಕಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಡಿ ಪ್ರದೇಶಗಳ ಶಾಲಾ ಮಕ್ಕಳು ಕನ್ನಡ ಪುಸ್ತಕಗಳ ಕೊರತೆಯಿರುವುದನ್ನು ಮನಗಂಡ ಪ್ರಾಧಿಕಾರ, ಉಚಿತ ಪುಸ್ತಕಗಳನ್ನು ರಾಜ್ಯಾದ್ಯಂತ ವಿತರಿಸುತ್ತಿದೆ ಎಂದು ತಿಳಿಸಿದ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಪ್ರತಿ ಶಾಲೆಗೆ ೨೦ ಸಾವಿರ ಮೌಲ್ಯದ ೨೦೦ಕ್ಕೂ ಹೆಚ್ಚು ಹಲವು ಪುಸ್ತಕ ನೀಡಲಾಗುತ್ತಿದೆ ಎಂದರು.
ಸಾ.ಶಿ.ಇಲಾಖೆ ಜಂಟಿ ನಿರ್ದೇಶಕ ಹಾಗೂ ಅಕ್ಷರ ದಾಸೋಹ ನೋಡಲ್ ಅಧಿಕಾರಿ ವಿ.ವೆಂಕಟೇಶಯ್ಯ, ದೃಶ್ಯಮಾಧ್ಯಮದ ದುಷ್ಟರಿಣಾಮದಿಂದಾಗಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಜ್ಞಾನಕ್ಕಿಂತ ಮಿಗಿಲಾದ ಆಸ್ತಿ ಮತ್ತೊಂದಿಲ್ಲ ಎಂದರು.
ಡಿಡಿಪಿಐ ವೆಂಕಟೇಶಪ್ಪ, ಪುರಸಭೆ ಸದಸ್ಯ ಎಂ.ಕೆ.ನಂಜುಂಡಯ್ಯ, ಪ್ರಾಧಿಕಾರದ ಸಂಚಾಲಕ ಹೊರೆಯಾಲ ದೊರೆಸ್ವಾಮಿ, ಸರ್ಕಾರಿ ಪಪೂ ಕಾಲೇಜು ಪ್ರಾಂಶುಪಾಲ ವೈ.ಆರ್. ಚಿನ್ನತಿಮ್ಮಪ್ಪ ಮಾತನಾಡಿದರು.
ಆಡಳಿತಾಧಿಕಾರಿ ಅಶೋಕ್ ಎನ್. ಚಲವಾದಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಡಿಡಿಪಿಐ ವೆಂಕಟೇಶಪ್ಪ ಸ್ವಾಗತಿಸಿದರು. ದೈಹಿಕ ಶಿಕ್ಷಕ ಟಿ.ಎಸ್. ಕೃಷ್ಣಚಾರಿ ನಿರೂಪಿಸಿದರು. ಬಿಇಒ ವಂದಿಸಿದರು.
ಸಂಗ್ರಹ: http://www.kannadaprabha.com
|