|
Written by MS Rajanikanth
|
"ಎಸ್.ವಿ. ಪರಮೇಶ್ವರ ಭಟ್ಟ" - (೧೯೧೪-೨೦೦೦)
ಎಸ್.ವಿ. ಪರಮೇಶ್ವರ ಭಟ್ಟರು ಜನಿಸಿದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ೧೯೧೪ರ ಫೆಬ್ರವರಿ ೮ರಂದು. ತಂದೆ: ಸದಾಶಿವ ರಾಯರು. ತಾಯಿ: ಲಕ್ಷ್ಮಮ್ಮ. ತೀರ್ಥಹಳ್ಳಿ, ಬೆಂಗಳೂರುಗಳಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು.
ಮೈಸೂರು ಮಹಾರಾಜಾ ಕಾಲೇಜಿನಿಂದ ೧೯೩೮ರಲ್ಲಿ ಎಂ.ಎ. ಪದವಿ ಪಡೆದರು. ಅಲ್ಲಿಯೇ ಕನ್ನಡ ಅಧ್ಯಾಪಕರಾಗಿ ಅವರ ವೃತ್ತಿಜೀವನ ಆರಂಭವಾಯಿತು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಎಸ್.ವಿ.ಪಿ.ಯವರು ಬಹುಶ್ರುತ ವಿದ್ವಾಂಸರಾಗಿದ್ದರು. ಪ್ರಧಾನವಾಗಿ ಕವಿಗಳು. ಸಂಸ್ಕೃತದಿಂದ ಸಮರ್ಥವಾಗಿ ಕಾಳಿದಾಸನ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಗಿಣಿ, ಸುರಗಿ ಸುರಹೊನ್ನೆ, ತುಂಬೆಹೂವು-ಅವರ ಪ್ರಮುಖ ಕವನ ಸಂಕಲನಗಳು. ಕನ್ನಡ ಕಾಳಿದಾಸ ಮಹಾ ಸಂಪುಟ, ಕನ್ನಡ ಭಾಸ ಮಹಾ ಸಂಪುಟ, ಕನ್ನಡ ಹರ್ಷ ಮಹಾ ಸಂಪುಟ, ಕನ್ನಡ ಬುದ್ಧ ಚರಿತೆ, ಕನ್ನಡಗಾಥಾ ಸಪ್ತಶತಿ, ಕನ್ನಡ ಗೀತಗೋವಿಂದ, ಕನ್ನಡ ಕವಿ ಕೌಮುದಿ, ಕನ್ನಡ ಅಮರ ಶತಕ ಇತ್ಯಾದಿ. ಸೀಳು ನೋಟ ವಿಮರ್ಶಾ ಕೃತಿ. ಅವರು ಸಂಪಾದಿಸಿದ ಕೃತಿಗಳೆಂದರೆ: ಮುದ್ದಣ ಕವಿಯ ಶ್ರೀರಾಮ ಪಟ್ಟಾಭಿಷೇಕಂ, ಮುದ್ದಣ ಕವಿಯ ಅದ್ಭುತ ರಾಮಾಯಣಂ, ಭೂಮಿ ಮತ್ತು ಧೂಮಕೇತು, ಕಣ್ಣುಮುಚ್ಚಾಲೆ-ಮಕ್ಕಳ ಸಾಹಿತ್ಯ ರಚನೆಗಳು.
೧೯೬೫-೬೬ರಲ್ಲಿ ಇಂದ್ರ ಚಾಪ ಮತ್ತು ಚಂದ್ರವೀಧಿ ಕೃತಿಗಳನ್ನು ಅವರು ಪ್ರಕಟಿಸಿದರು. ಇವುಗಳು ಪ್ರತಿಯೊಂದರಲ್ಲೂ ೭೦೦ ಮುಕ್ತಕಗಳಿವೆ. ಅವರ ಕಾಳಿದಾಸ ಮಹಾಸಂಪುಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ ನೀಡಿದೆ. ಮೈಸೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳಿಂದ ಗೌರವ ಡಿ.ಲಿಟ್ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವಗಳು ಅವರಿಗೆ ದೊರೆತಿವೆ.
ಪರಮೇಶ್ವರ ಭಟ್ಟರು ನಿಧನ ಹೊಂದಿದ್ದು ೨೦೦೦ನೇ ಇಸವಿಯ ಅಕ್ಟೋಬರ್ ೨೭ರಂದು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|