|
Written by MS Rajanikanth
|
"ರಾವಬಹದ್ದೂರ" - (೧೯೧೧-೧೯೮೪)
ರಾಮಚಂದ್ರ ಭೀಮರಾವ್ ಕುಲಕರ್ಣಿಯವರು ಜನಿಸಿದ್ದು ೧೯೧೦ರ ಸೆಪ್ಟೆಂಬರ್ ೨೪ರಂದು; ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ ಹಿರೇ ಪಡಸಲಗಿಯಲ್ಲಿ. ತಂದೆ: ಭೀಮರಾವ್ ಕುಲಕರ್ಣಿ. ತಾಯಿ: ಸುಭದ್ರಾಬಾಯಿ. ಕಾವ್ಯನಾಮ ’ರಾವಬಹದ್ದೂರ’.
ಹಿರೇಕೆರೂರು, ಜಮಖಂಡಿ, ಬಿಜಾಪುರ, ಧಾರವಾಡಗಳಲ್ಲಿ ಅವರ ಶಿಕ್ಷಣ ನಡೆಯಿತು. ಬಿ.ಎ. ಪದವಿ ಪಡೆದರು. ಪತ್ರಿಕೋದ್ಯಮಿಯಾಗಿ ವೃತ್ತಿಜೀವನ ಆರಂಭಿಸಿದರು.
’ಜಯಂತಿ’ ಪತ್ರಿಕೆ, ಸಂಯುಕ್ತ ಕರ್ನಾಟಕಗಳಲ್ಲಿ ಕೆಲಸ ಮಾಡಿ, ತಾವೇ ೧೯೬೧ರಲ್ಲಿ ’ಕಲ್ಯಾಣ’ ಕನ್ನಡ ಮಾಸಪತ್ರಿಕೆ ಆರಂಭಿಸಿ ಕೆಲಕಾಲ ನಡೆಸಿದರು. ಅವರ ಮೊದಲ ಕಥೆ - ಚಂದ್ರಗ್ರಹಣ. ಅವರು ಬರೆದ ಕಾದಂಬರಿಗಳು ಹನ್ನೊಂದು. ’ಗ್ರಾಮಾಯಣ’ ಅವರಿಗೆ ಜನಪ್ರಿಯತೆ ಹಾಗೂ ಗೌರವಗಳನ್ನು ತಂದಿತ್ತ ಕಾದಂಬರಿ. ಬಾಳುಬಂಗಾರ, ಬಿತ್ತಿ ಬೆಳೆದವರು, ಧೂಮಕೇತು, ಗೌಡರ ಕೋಣ, ಮುತ್ತುಕಟ್ಟಿದವಳು, ಕನಸು-ನನಸು, ಕಾಂಚನ ಮೃಗ, ಬಾಳಬಂಗಾರ, ತಬ್ಬಲಿಗಳು, ಇತ್ಯಾದಿ. ಮನಸುಟ್ಟಕಿಡಿ, ಮನಬೆಳಗಿತು. ಇತಿಹಾಸ ಭೂತ ಇತ್ಯಾದಿ ಕಥಾ ಸಂಕಲನಗಳು.
ಪಾಂಚಜನ್ಯ-ನಾಟಕ. ನಾನು ಕಂಡ ಬಾಂಗ್ಲಾದೇಶ-ಪ್ರವಾಸ ಕಥನ. ಸೌಮ್ಯವಾದ, ಕರ್ಮಯೋಗಿ ಹಣಮಂತರಾಯ ಇತರೇ ಕೃತಿಗಳು. ’ಪಡುವಾರಳ್ಳಿ ಪಾಂಡವರು’ ಚಲನಚಿತ್ರ ಕಥೆ ರಚಿಸಿದ್ದಾರೆ. ಮೈಸೂರಿನ ಧ್ವನ್ಯಾಲೋಕದಲ್ಲಿ ಕೆಲವು ಕಾಲ ರೆಸಿಡೆಂಟ್ ಫೆಲೋ ಆಗಿದ್ದರು.
ಅವರ ’ಇತಿಹಾಸ ಭೂತ’ ಕಥೆಗೆ ೧೯೧೫ರಲ್ಲಿ ಜಾಗತಿಕ ಬಹುಮಾನ ಲಭಿಸಿತ್ತು. ಬಿತ್ತಿ ಬೆಳೆದವರು, ಮರೆಯದ ನೆನಹುಗಳು, ಗೌಡರ ಕೋಣ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ೧೯೭೫ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಅವರನ್ನು ಗೌರವಿಸಿತ್ತು.
ರಾವಬಹದ್ದೂರರು ನಿಧನ ಹೊಂದಿದ್ದು ೧೯೮೪ರ ಡಿಸೆಂಬರ್ ೩೧ರಂದು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|