|
"ಪುರೋಹಿತ ತಿರುನಾರಾಯಣ ಅಯ್ಯಂಗಾರ್" ನರಸಿಂಹಾಚಾರ್ಯರು ಜನಿಸಿದ್ದು ಮೇಲುಕೋಟೆಯಲ್ಲಿ; ೧೯೦೫ರ ಮಾರ್ಚ್ ೧೭ರಂದು. ತಂದೆ: ತಿರುನಾರಾಯಣ ಅಯ್ಯಂಗಾರ್. ತಾಯಿ: ಶ್ರೀರಂಗಮ್ಮ. ಮೇಲುಕೋಟೆಯ ಪ್ರಾಥಮಿಕ ಶಾಲೆ, ಸಂಸ್ಕೃತ ಪಾಠಶಾಲೆ, ಮೈಸೂರಿನ ಮಹರಾಜಾ ಹೈಸ್ಕೂಲು ಹಾಗೂ ಕಾಲೇಜುಗಳಲ್ಲಿ ಅವರ ವಿದ್ಯಾಭ್ಯಾಸ ಸಾಗಿತು. ೧೯೨೬ರಲ್ಲಿ ಬಿ.ಎ. ಪದವಿ ಪಡೆದರು. ಓದುತ್ತಿರುವಾಗಲೇ ಹೆಮ್ಮಿಗೆಯ ಶ್ರೀಮತ್ ಶೇಷಮ್ಮನವರೊಂದಿಗೆ ವಿವಾಹವಾಯಿತು.
ಮೈಸೂರು ಸೈನ್ಯದ ಕಚೇರಿಯಲ್ಲಿ ಶೀಘ್ರಲಿಪಿಕಾರರಾಗಿ, ಗುಮಾಸ್ತರಾಗಿ, ಕಚೇರಿಯ ಮ್ಯಾನೇಜರ್ ಆಗಿ ಅವರ ವೃತ್ತಿಜೀವನ ಸಾಗಿತು. ಶಾಸನ ಸಭಾ ಕಚೇರಿಯಲ್ಲಿ ಸಂಪಾದಕರಾಗಿಯೂ ಸೇವೆ; ೧೯೬೩ರಿಂದ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ ಹಾಗು ೧೯೬೬-೭೧ರ ವರೆಗೆ ಇಂಗ್ಲೀಷ್-ಕನ್ನಡ ನಿಘಂಟು ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪು.ತಿ.ನ ಅವರ ಸಾಹಿತ್ಯ ಸೃಷ್ಟಿ ವೈವಿಧ್ಯಮಯವಾದದ್ದು. ಕಾವ್ಯ, ನಾಟಕ, ಕಾವ್ಯಾರ್ಥ ಚಿಂತನೆ, ಲಲಿತ ಪ್ರಬಂಧ, ಅನುವಾದ ಹೀಗೆ ಹಲವು ಕ್ಷೇತ್ರ. ಅವರ ಮೊದಲ ಸಂಕಲನ ತಳಿರು, ಹಣತೆ, ಮಾಂದಳಿರು, ಶಾರದಾಯಾಮಿನಿ, ಗಣೇಶ ದರ್ಶನ, ರಸ ಸರಸ್ವತಿ, ಮಲೆದೇಗುಲ, ಹೃದಯ ವಿಹಾತಿ, ಇರುಳ ಮೆರಗು, ಹಳೆಬೇರು ಹೊಸಚಿಗುರು ಕವನ ಸಂಕಲನಗಳು. ಶ್ರೀ ಹರಿಚರಿತೆ, ಹಣತೆಯ ಹಾಡು ಆನಂತರ ಬಂದ ಸಂಕಲನಗಳಾದರೆ, ಗೋಕುಲ ನಿರ್ಗಮನ, ಅಹಲ್ಯೆ, ದೋಣಿಯ ಬಿನದ, ವಿಕಟಕವಿ ವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು. ಶ್ರೀರಾಮ ಪಟ್ಟಾಭಿಷೇಕ, ಸತ್ಯಾಯನ ಹರಿಶ್ಚಂದ್ರ, ಜಾಹ್ನವಿಗೆ ಜೋಡಿ ದೀವಿಗೆ, ಸಮಗ್ರ ಗೇಯ ಕಾವ್ಯ ನಾಟಕಗಳು ಪ್ರಕಟವಾದವು.
೧೯೮೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ೫೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೋರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿಗಳು ಅವರಿಗೆ ಸಂದವು. ಅವರು ನಿಧನ ಹೊಂದಿದ್ದು ೧೯೯೮ರ ಅಕ್ಟೋಬರ್ ೧೩ರಂದು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|