"ಗೌರೀಶ ಕಾಯ್ಕಿಣಿ" - (೧೯೧೨-೨೦೦೨)
ಗೌರೀಶ ಕಾಯ್ಕಿಣಿಯವರು ಜನಿಸಿದ್ದು ೧೯೧೨ರ ಸೆಪ್ಟೆಂಬರ್ ೧೧ರಂದು; ಗೋಕರ್ಣದಲ್ಲಿ. ತಂದೆ: ವಿಠಲರಾವ್ ಕಾಯ್ಕಿಣಿ; ತಾಯಿ: ಸೀತಾಬಾಯಿ. ಚಿಕ್ಕಂದಿನಲ್ಲಿಯೇ ತಾಯಿ ತೀರಿಕೊಂಡಿದ್ದರಿಂದ ತಾಯಿಯ ತೌರುಮನೆ ಗೋಕರ್ಣವೇ ಅವರ ಊರಾಯಿತು. ಮುಂದೆ ಅದು ಅವರ ಕಾರ್ಯಕ್ಷೇತ್ರವೂ ಆಯಿತು. ಗೋಕರ್ಣದಲ್ಲೇ ಅವರ ಶಿಕ್ಷಣವೂ ನಡೆಯಿತು. ಅನಾರೋಗ್ಯದಿಂದಾಗಿ ಶಿಕ್ಷಣ ಮುಂದುವರಿಯಲಿಲ್ಲ.
೧೯೩೭ರಲ್ಲಿ ಅವರು ಉಪಾಧ್ಯಾಯರಾಗಿ ವೃತ್ತಿ ಜೀವನ ಆರಂಭಿಸಿದರು. ಗೋಕರ್ಣದ ಭದ್ರಕಾಳಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಗೌರೀಶರು ಬರೆಯಲು ಆರಂಭಿಸಿದ್ದು ಮರಾಠಿಯಲ್ಲಿ. ಆನಂತರ ಕನ್ನಡ ಪತ್ರಿಕೆಗಳಲ್ಲಿ ಬರೆಯಲು ಆರಂಭಿಸಿದರು. ’ನಂದಿನಿ’ ವಾರಪತ್ರಿಕೆ, ’ಜಯಂತಿ’ ಮಾಸಪತ್ರಿಕೆ, ಜನಸೇವಕ, ನಾಗರಿ, ಜನಪ್ರಗತಿ, ಮಿಂಚಿನಬಳ್ಳಿ, ಸಮನ್ವಯ, ಪತ್ರಿಕೆಗಳಲ್ಲಿ ಅವರು ನಿಯಮಿತವಾಗಿ ಬರೆಯುತ್ತಿದ್ದರು. ನಾಟಕ, ಸಣ್ಣಕಥೆ, ಕವನ, ಸಂಕಲನ, ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಅಂಕೋಲಾದಿಂದ ಪ್ರಕಟವಾಗುತ್ತಿದ್ದ ಜನಸೇವಕದಲ್ಲಿ ಅವರ ಹಲವಾರು ಲೇಖನಗಳು ಪ್ರಕಟವಾಗಿವೆ.
ನವಮಾನವತಾವಾದ, ನಾಸ್ತಿಕ ಮತ್ತು ದೇವರು, ಮನೋವಿಜ್ಞಾನದ ರೂಪುರೇಷೆಗಳು, ಮಾರ್ಕ್ಸ್ವಾದ, ಸತ್ಯಾರ್ಥಿ, ವಿಶ್ವದ ಆಖ್ಯಾಯಿಕೆಗಳು, ಗೋಕರ್ಣ, ಗಂಡುಹೆಣ್ಣು, ಕ್ರೌಂಚಧ್ವನಿ, ಗಂಗೆಯ ತಡಿಯಲ್ಲಿ, ಭಾರತೀಯ ವಿಜ್ಞಾನಿಗಳು ಅವರ ಕೆಲವು ಕೃತಿಗಳು. ಅವರ ಸಮಗ್ರ ಲೇಖನಗಳ ಸಂಗ್ರಹಗಳು ಪ್ರಕಟವಾಗಿವೆ.
೧೯೭೩ರಲ್ಲಿ ರಾಜ್ಯ ಸರ್ಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ೧೯೯೩ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಸಂದಿವೆ.
೧೯೭೨ರಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.
ಅವರು ನಿಧನ ಹೊಂದಿದ್ದು ೨೦೦೨ರ ನವೆಂಬರ್ ೧೪ರಂದು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|