|
"ಡಿ.ವಿ. ಗುಂಡಪ್ಪ" - (೧೮೮೭-೧೯೭೫)
ಡಿ.ವಿ. ಗುಂಡಪ್ಪನವರು ಜನಿಸಿದ್ದು ೧೮೮೭ರ ಮಾರ್ಚ್ ೧೭ರಂದು; ಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅವರು ಮುಳಬಾಗಿಲು ಕೋಲಾರದಲ್ಲಿ ಪಡೆದರು. ಪ್ರೌಢಶಾಲೆಯನ್ನು ಮೈಸೂರಿನಲ್ಲಿ ಓದಿದರು. ೧೯೦೮ರಲ್ಲಿ ನವರತ್ನಕೃಷ್ಣಸ್ವಾಮಿ ಅವರ ಜತೆಗೂಡಿ ’ಭಾರತಿ’ ಪತ್ರಿಕೆಗೆ ಸಹ ಸಂಪಾದಕರಾಗಿ ಆ ಪತ್ರಿಕೆಯನ್ನು ಆರಂಭಿಸಿದರು. ೧೯೧೩ರಲ್ಲಿ ಬೆಂಗಳೂರಿಗೆ ಬಂದು "ಕರ್ನಾಟಕ" ಅರ್ಧವಾರ ಪತ್ರಿಕೆಯನ್ನು ಆರಂಭಿಸಿದರು. ೧೯೨೧ರಲ್ಲಿ ಇಂಡಿಯನ್ ರೆವ್ಯು ಆಫ್ ರೆವ್ಯೂಸ್’ ಎಂಬ ಆಂಗ್ಲ ಮಾಸಪತ್ರಿಕೆಯನ್ನು, ೧೯೨೩ರಲ್ಲಿ "ಕರ್ನಾಟಕ ಜನಜೀವನ ಮತ್ತು ಅರ್ಥಸಾಧಕ" ಪತ್ರಿಕೆಯನ್ನು ಆರಂಭಿಸಿ ನಡೆಸಿದರು.
ಅವರ ಸಾಹಿತ್ಯಿಕ ಸೇವೆಯೂ ಅಗಾಧವಾದದ್ದು. ದಿವಾನ್ ರಂಗಾಚಾರ್ಲು, ಗೋಪಾಲಕೃಷ್ಣ ಗೋಖಲೆ, ವಿದ್ಯಾರಣ್ಯ ವೃತ್ತಾಂತ, ದಾದಾಭಾಯಿ ನವರೋಜಿ - ಜೀವನ ಚರಿತ್ರೆಗಳು. ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯಶಕ್ತಿ, ಸಂಸ್ಕೃತಿ, ಕಾವ್ಯ ಸ್ವಾರಸ್ಯ ಸಾಹಿತ್ಯಿಕ ಕೃತಿಗಳು. ತಿಲೋತ್ತಮೆ, ಕನ್ನಡ ಮ್ಯಾಕ್ಬೆತ್, ವಿದ್ಯಾರಣ್ಯ ವಿಜಯ, ಪರಶುರಾಮ ನಾಟಕಗಳು. ಮಂಕುತಿಮ್ಮನ ಕಗ್ಗ (೧೯೪೩). ಉಮರನ ಬಸಗೆ (೧೯೩೦) ಮಹಾತ್ಮಾಗಾಂಧಿ, ಅಂತಃಪುರ ಗೀತೆ, ಶ್ರೀ ರಾಮ ಪರೀಕ್ಷಣಂ, ಶೃಂಗಾರ ಮಂಗಳಂ - ಕೆಲವು ಕಾವ್ಯಗಳು. ಹನ್ನೊಂದು ಸಂಪುಟಗಳಲ್ಲಿ ಡಿ.ವಿ.ಜಿ. ಅವರ ಕೃತಿಗಳು ಲಭ್ಯವಿದೆ.
೧೯೨೬-೪೦ರ ವರೆಗೆ ಅವರು ಮೈಸೂರು ನ್ಯಾಯವಿಧಾಯಕ ಸಭೆ ಸದಸ್ಯರಾಗಿದ್ದರು. ೧೯೨೮ರಲ್ಲಿ ಕರ್ನಾಟಕ ವೃತ್ತ ಪತ್ರಿಕಾಕರ್ತರ ಪ್ರಥಮ ಪರಿಷತ್ತಿನ ಅಧ್ಯಕ್ಷರಾದರು. ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೩೫ರಲ್ಲಿ ಬೆಂಗಳೂರಿನಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಆರಂಭಿಸಿದರು. ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ’ಪದ್ಮಭೂಷಣ’ ಪ್ರಶಸ್ತಿಗಳು ಅವರಿಗೆ ಸಂದಿವೆ. ಡಿವಿಜಿ ಸನ್ಮಾನ ಸಮಿತಿ ಅರ್ಪಿಸಿದ ೧ ಲಕ್ಷ ರೂಪಾಯಿ ಗೌರವ ಧನವನ್ನು ಗೋಖಲೆ ಸಂಸ್ಥೆಗೆ ದಾನ ಮಾಡಿದರು.
ಈ ಮಹಾನ್ ಪತ್ರಕರ್ತ, ಕವಿ, ಸಾಹಿತಿ, ತತ್ವಜ್ಞಾನಿ, ದಾನಿ ನಿಧನ ಹೊಂದಿದ್ದು ೧೯೭೫ರ ಅಕ್ಟೋಬರ್ ೭ರಂದು ಬೆಂಗಳೂರಿನಲ್ಲಿ.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|