|
Written by MS Rajanikanth
|
|
"ಬೀಚಿ" - (೧೯೧೩-೧೯೮೦)
ಭೀಮಸೇನರಾವ್ ರಾಯಸಂ ಅವರು ಜನಿಸಿದ್ದು ೧೯೧೩ರ ಏಪ್ರಿಲ್ ೨೩ರಂದು. ಎಸ್.ಎಸ್.ಎಲ್.ಸಿ. ಪಾಸು ಮಾಡಿ ಪೋಲೀಸ್ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು.
ಸಿಐಡಿ ಸ್ಪೆಶಲ್ ಬ್ರಾಂಚ್ ಸೂಪರಿಂಟೆಂಡಂಟರಾಗಿ ನಿವೃತ್ತರಾದರು. ಊರು ಹರಪನಹಳ್ಳಿ. ಬಳ್ಳಾರಿಯಲ್ಲಿ ಬಾಲ್ಯ ಹಾಗೂ ಉದ್ಯೋಗದ ಮೊದಲ ದಿನಗಳನ್ನು ಕಳೆದರು.
ಕನ್ನಡ ಸಾಹಿತ್ಯ ಲೋಕದಲ್ಲಿ ಬೀಚಿ ಅವರದು ವಿಶೇಷ ರೂಪ. ಜನರನ್ನು ನಗಿಸುವ ಮೂಲಕ ಚಿಂತನೆಗೂ ಹಚ್ಚಿದವರು. ದಾಸಕೂಟ ಅವರ ಮೊದಲ ಕಾದಂಬರಿ. ಸತೀಸೂಳೆ, ಸರಸ್ವತಿ ಸಂಹಾರ, ಮೇಡಮ್ಮನ ಗಂಡ, ಮಹಾಯುದ್ಧ, ಗರತಿಯ ಗುಟ್ಟು, ದೇವರಿಲ್ಲದ ಗುಡಿ ಇತ್ಯಾದಿ. ತಿಂಮನ ತಲೆ, ತಿಂಮ ರಸಾಯನ, ಬೆಳ್ಳಿ ತಮ್ಮ ನೂರೆಂಟು ಹೇಳಿದ, ಅಂದನಾ ತಿಂಮ, ಹೆಂಡತಿ ನಕ್ಕಾಗ, ಉತ್ತರ ಭೂಪ, ಮಾತ್ರೆಗಳು, ಕಾಮಾಯಣ ಇತ್ಯಾದಿ ನಗೆ ಬರಹಗಳು.
ನನ್ನ ಬಯಾಗ್ರಫಿ(೧೯೭೭) - ಆತ್ಮಕಥನ. ಒಟ್ಟು ಕೃತಿಗಳ ಸಂಖ್ಯೆ ಸುಮಾರು ೫೬. ಅದರಲ್ಲಿ ಬಹುಪಾಲು ಪುನರ್ ಮುದ್ರಣಗೊಂಡಿವೆ. ೧೯೪೬ರಲ್ಲಿ ಪ್ರಕಟಗೊಂಡ ರೇಡಿಯೋ ನಾಟಕಗಳು ಬೀಚಿಯವರಿಗೆ ಕೀರ್ತಿ ತಂದವು.
ತಿಂಮ ಅವರ ವಿಶೇಷ ಸೃಷ್ಟಿ. ಅವರ ಹಾಸ್ಯದ ಹಿಂದೆ ನೋವಿನ ಅಂಶಗಳಿರುತ್ತಿದ್ದವು. ಸಮಾಜವನ್ನು ತಿದ್ದುವ ದೃಷ್ಟಿ ಇರುತ್ತಿತ್ತು. ಅವರು ಕನ್ನಡವನ್ನು ಬಳಸಿದ ರೀತಿಯೇ ಬಹು ವಿಶಿಷ್ಟವಾದದ್ದು. ಜನ ಅವರ ಕನ್ನಡ ರೂಪವನ್ನು ಮನಸಾರೆ ಒಪ್ಪಿದರು. ’ತಿಂಮನ ತಲೆ’ ಕೃತಿಗೆ ಹಿಂದಿನ ಮದ್ರಾಸ್ ಸರ್ಕಾರದಿಂದ ಬಹುಮಾನ ದೊರಕಿತ್ತು. ಈ ಪುಸ್ತಕ ಹನ್ನೊಂದಕ್ಕೂ ಹೆಚ್ಚಿನ ಮುದ್ರಣಗಳನ್ನು ಕಂಡಿದೆ.
ಕಾದಂಬರಿ, ಕಥೆ, ಪದ್ಯ, ಹರಟೆ- ಎಂದು ಅವರ ಬರಹಗಳನ್ನು ವಿಭಾಗಿಸಬಹುದು. ಕನ್ನಡಿಗರ ಮನೆ ಮಾತಾಗಿದ್ದ ಅವರು ನಿಧನ ಹೊಂದಿದ್ದು ೧೯೮೦ರ ಡಿಸೆಂಬರ್ ೭ರಂದು, ಬೆಂಗಳೂರಿನಲ್ಲಿ.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|