Log In | Join Now
Home arrow Sahitya Chintane arrow Authors arrow Pustaka Marata : Sudharane Hege
Pustaka Marata : Sudharane Hege Print
Written by Sri Vishnu Nayak   

’ನಮ್ಮೊಂದಿಗೆ ಪುಸ್ತಕಗಳಿದ್ದರೆ ನಾವೆಂದಿಗೂ ಒಬ್ಬಂಟಿಗರಾಗಿರುವುದಿಲ್ಲ ಎನ್ನುತ್ತಾರೆ - ಈ ದೇಶದ ಶ್ರೇಷ್ಠ ಶಿಕ್ಷಕರಲ್ಲಿ ಒಬ್ಬರಾದ ಡಾ. ಸರ್ವಪಲ್ಲಿ ರಾಧಕೃಷ್ಣನ್. ’ಒಂದು ಉತ್ತಮ ಗ್ರಂಥವನ್ನು ನಾಶಪಡಿಸುವುದೆಂದರೆ ಒಬ್ಬ ಸಜ್ಜನ ಮನುಷ್ಯನನ್ನೇ ಕೊಂದಂತೆ’ ಎನ್ನುತ್ತಾರೆ ಜಾನ್ ವಿಲ್ಟನ್.

ಆದರೆ ನಮ್ಮ ಕಣ್ಮುಂದೆ ಪುಸ್ತಕಗಳಿವೆ; ಕೊಳ್ಳುವ ವ್ಯವಸ್ಥೆ ಸರಿಯಾಗಿಲ್ಲ. ಒಂದೊಂದು ಪುಸ್ತಕವೂ ಒಂದೊಂದು ಪ್ರಬುದ್ದ ಮೆದುಳಿನ ಫಲ. ಅದನ್ನು ಸಾಯಿಸಬಾರದು ಎಂಬ ಪರಿಜ್ಞಾನ ನಮ್ಮ ಬಹುಸಂಖ್ಯೆ ಜನರಿಗೂ ಇಲ್ಲ; ಜನಪ್ರತಿನಿಧಿಗಳಿಂದ ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೂ ಇಲ್ಲ.

 

ಕನ್ನಡದ ಗ್ರಂಥ ಪ್ರಕಾಶನ್ ವ್ಯವಸ್ಥೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದಾಗುದೆ. ಲೇಖಕನೇ ಪ್ರಕಾಶಕನಾಗಿ ಹೊರತರುತ್ತಿರುವ ಪುಸ್ತಕಗಳದು ಒಂದು ಭಾಗ. ಸಾಹಿತ್ಯಕ - ಸಾಂಸ್ಕೃತಿಕ ಕಳಕಳಿಯಿಂದ ಗ್ರಂಥ ಪ್ರಕಟಣೆಗೆ ಇಳಿದ ಹವ್ಯಾಸಿ ಪ್ರಕಾಶನಗಳೆಂಬ ಇನ್ನೊಂದು ವರ್ಗ. ಪುಸ್ತಕ ಪ್ರಕಟಣೆಯನ್ನು ಬೃಹತ್ ಉದ್ಯಮವಾಗಿ ಪರಿಗಣಿಸಿ ಅಪ್ಪಟ ವ್ಯಾಪಾರೀ ಮನೋಭಾವದೊಂದಿಗೆ ನಡಿಸಿಕೊಂಡು ಬಂದಿರುವ - ಬಹುಕೋಟಿ ಹಣ ತೊಡಗಿಸಿದ ಪ್ರಕಾಶನೋದ್ಯಮಿಗಳ ಮತ್ತೊಂದು ವರ್ಗ. ನಾಲ್ಕನೆಯದು ಸರಕಾರದ ಅನುದಾನದಿಂದ ನಡೆಯುವ ಅಥವಾ ಸರಕಾರದ್ದೇ ಅಂಗಸಂಸ್ಥೆಗಳಂತೆ ಕೆಲಸ ಮಾಡುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಗಳು, ವಿವಿಧ ಅಕಾಡೆಮಿಗಳು ಇತ್ಯಾದಿ.

    ಹೀಗೆ ಕನ್ನಡ ಪ್ರಕಾಶನ ವ್ಯವಸ್ಥೆಯಲ್ಲಿ ನಾಲ್ಕು ಬಗೆಯ ಮನಸ್ಸುಗಳು ಕೆಲಸ ಮಾಡುತ್ತಿರುವುದರಿಂದ ಮಾರಾಟಕ್ಕೆ ಸಂಬಂಧಪಟ್ಟಂತೆ ಏಕರೂಪದ ಒಂದು ಸೂತ್ರ ಹೆಣೆದುಕೊಳ್ಳುವುದಕ್ಕೆ ಇದುವರೆಗೆ ಸಾಧ್ಯವಾಗಿಲ್ಲ ಮತ್ತು ಈ ನಾಲ್ಕೂ ವರ್ಗ ಕನ್ನಡ ಗ್ರಂಥೋದ್ಯಮದ ಬೆಳವಣೆಗೆ ಕುಂಠಿತವಾಗುವುದಕ್ಕೆ ತಮ್ಮ ತಮ್ಮ ಪಾಲಿನ ಕೊಡುಗೆಯನ್ನು ನೀಡಿಯೂ, - ಮುಖ್ಯ ಅರೋಪಿಯ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡುವುದು ಸರ್ಕಾರವನ್ನೇ ಅದಕ್ಕೆ ಕಾರಣವೂ ಉಂಟು. ಇಂಥ ಒಂದು ಅಸ್ಪಷ್ಟ ವ್ಯವಸ್ಥೆ ಒಳ ಬಿಕ್ಕಟ್ಟುಗಳಿಗೆಲ್ಲ ಹೆಚ್ಚಿನಂಶ ಸರ್ಕಾರದ ಪದೇ ಪದೇ ಬದಲಾಗುತ್ತಿರುವ ಪುಸ್ತಕ ನೀತಿಯೇ ಎಂಬುದರಲ್ಲಿ ಅನುಮಾನವಿಲ್ಲ. ಸರ್ಕಾರ ಅಂದರೆ ಯಾರು ಎಂಬ ಪ್ರಶ್ನೆ ಇಲ್ಲಿಯೇ ಕೇಳಿಕೊಳ್ಳಬೇಕಾದದ್ದು ಇದೆ, ಆ ಮಾತು ಬೇರೆ.

 

ಗ್ರಂಥೋದ್ಯಮದ ಅಭಿವೃದ್ಧಿಯ ವಿಚಾರದಲ್ಲಿ ಇಡೀ ದೇಶಕ್ಕೆ ಮಾರ್ಗದರ್ಶನ ನೀಡಬಲ್ಲಂಥ ಗ್ರಂಥಾಲಯ ತಜ್ಞರು ಕರ್ನಾಟಕದಲ್ಲೇ ಇದ್ದರು, ಇದ್ದಾರೆ ಕೂಡ. ಸರ್ಕಾರಕ್ಕೆ ಇದು ಗೊತ್ತಿಲ್ಲವೆ ಅಥವಾ ಗೊತ್ತಿದ್ದೂ ಜಾಣಕುರುಡನ್ನು ಪ್ರದರ್ಶಿಸುತ್ತಿದೆಯೆ ಎಂದು ಕೇಳಬೇಕಾಗುತ್ತದೆ.

    ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳು ಗ್ರಂಥ ಪ್ರಕಟನೆಗೆ ಸಂಬಂಧಪಟ್ಟಂತೆ, ಒಂದಲ್ಲಾ ಒಂದು ಅರ್ಥದಲ್ಲಿ ವಿಶೇಷ ಅನುಭವವನ್ನು ಪಡೆದಿಕೊಂಡಿರತಕ್ಕಂಥ ಆಯ್ದ ಲೇಖಕ - ಪ್ರಕಾಶಕರ ಸಭೆಯೊಂದನ್ನು ವಿಧಾನಸೌಧದ ಸಭಾಂಗಣದಲ್ಲಿ ಕರೆದಿದ್ದರು. ಅದಕ್ಕೆ ಪೂರ್ವದಲ್ಲಿ ಗ್ರಂಥಾಲಯ ಇಲಾಖೆಗೆ ಸಂಬಂಧಪಟ್ಟ ಹಿರಿಯ ಐ.ಎ.ಎಸ್. ಅಧಿಕಾರಿ ವಿಜಯಭಾಸ್ಕರ ಅವರು, ’ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಪರಿಣಿತರ ಸಭೆಯೊಂದನ್ನು ಕರೆದು, ಪ್ರಸ್ತುರ  ನಾಡಿನ ಲೇಖಕ ಪ್ರಕಾಶಕರು ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆ ಮುಕ್ತ ಚರ್ಚೆಗೆ ಆಹ್ವಾನಿಸಿದ್ದರು. ವಿಧಾನ ಪರಿಷತ್ ಸಭಾಪತಿಯವರು ಕರೆದದ್ದು ಗ್ರಂಥಾಲಯ ಸದನ ಸಮಿತಿ ಸಭೆಯ ಒಂದು ಮುಂದುವರಿದ ಭಾಗವಾಗಿತ್ತು. ಆ ಸಮಿತಿಯಲ್ಲಿದ್ದ ಕೆಲವು ಶಾಸಕರು ಅಂದಿನ ಸಭೆಗೆ ಬಂದಿದ್ದರು. ಹಿರಿಯ ವಿದ್ವಾಂಸರಾದ ಶಾಸಕ ಡಾ. ಕಂಬಾರ ಅವರೂ ಕೂಡ ಉಪಸ್ಥಿತರಿದ್ದರು. ಈ ಎರಡೂ ಸಭೆಗಳಲ್ಲಿ ಮೂಡಿ ಬಂದ ಅಭಿಪ್ರಾಯವನ್ನು ಈಗಲಾದರೂ ಸರ್ಕಾರ ಗಂಭೀರವಾಗಿ ಪರಿಗಣೆಸಿದಲ್ಲಿ ನಮ್ಮ ನಡುವೆ ಇರುವ ಪುಸ್ತಕ ಮಾರಾಟದ ಬಹಳಷ್ಟು ಸಮಸ್ಯೆಗಳು ಕರಗವಹುದಾಗಿದೆ. ಸರ್ಕಾರೀ ಮಟ್ಟದ ಗ್ರಂಥ ಖ್ರೀದಿ ವ್ಯವಸ್ಥೆಯಲ್ಲಿ ಏಕಗವಾಕ್ಷಿ ಪದ್ಧತಿಯನ್ನು - ಬಹುಪ್ರಸಿದ್ಧಿಯಿಂದ ರಾಜಧಾನಿ ಮೂಲದ ಒಬ್ಬ ಪ್ರಕಾಶಕರು ಬಿಟ್ಟರೆ - ಉಳಿದ ಎಲ್ಲರೂ ಒಪ್ಪಿಕೊಂಡಿರುವುದು ಬಹು ಅರ್ಥಪೂರ್ಣವಾದ ಬೆಳವಣಿಗೆಯೆಂದೇ ನಾನು ಭಾವಿಸಿದ್ದೇನೆ. ಪ್ರಾಯಶಃ ಸರ್ಕಾರಕ್ಕೂ ಕೂಡ ಈ ಸಲಹೆಯಲ್ಲಿ ಅರ್ಥವಿದೆ ಎಂಬುದು ಮನವರಿಕೆಯಾದಂತೆ ತೋರುತ್ತದೆ.

 

 

ರಾಜ್ಯದ ಎಲ್ಲ ಮೂಲೆಗಳಲ್ಲಿರುವ ಲೇಖಕ - ಪ್ರಕಾಶಕರು ಪುಸ್ತಕಗಳನ್ನು ಖರೀದಿಸಿ ರಜ್ಯ ಕೇಂದ್ರಾಲಯವಾಗಲಿ, ನಿರ್ದೇಶಕರ ಕಾರ್ಯಾಲಯವಾಗಲಿ ಇಟ್ಟುಕೊಳ್ಳುವುದಾದರೂ ಎಲ್ಲಿ ಸಾಮಾನ್ಯ ಪ್ರಶ್ನೆ ಇದ್ದಂತೆ ತೋರುತ್ತದೆ. ಅದರ ಅಗತ್ಯ ಇಲ್ಲದೆಯೂ ’ಏಕಗವಾಕ್ಷಿ’ ಪದ್ಧತಿಯನ್ನು ನಿರಂತರವಾಗಿ ಚಾಲ್ತಿಯಲ್ಲಿಡಬಹುದಾಗಿದೆ. ಇದೇನೂ ಸರ್ಕಾರಕ್ಕೆ ಹೊಸ ಅನುಭವವಲ್ಲ. ಸುಮಾರು ಎರಡು ದಶಕದಷ್ಟು ಹಿಂದೆ ಈ ಪದ್ಧತಿಯನ್ನೇ ನಮ್ಮ ಗ್ರಂಥಾಲಯ ಇಲಾಖೆ ಅನುಸರಿಸಿತ್ತು. ಆಯ್ಕೆಯಾದ ಗ್ರಂಥಕ್ಕೆ ಖರೀದಿ ಆದೇಶವನ್ನು ತಾನೇ ಕಳಿಸಿ ಅದರೊಂದಿಗೆ ಜಿಲ್ಲಾ ಮತ್ತು ನಗರ ಗ್ರಂಥಾಲಯಗಳ ವಿಳಾಸಪಟ್ಟಿಯನ್ನೂ- ಪುಸ್ತಕಗಳ ಪುರವಟೆ ಮಾಡುವುದಕ್ಕಾಗಿ ಇಟ್ಟಿತ್ತು. ಸುಮಾರು ಮೂರು ವರ್ಷ ಕಾಲ ಅಬಾಧಿತವಾಗಿ ನಡೆದ ಈ ವ್ಯವಸ್ಥೆಯನ್ನು ಬದಲಿಸಿ ವಿಕೇಂದ್ರೀಕರಣದ ಹೆಸರಿನಲ್ಲಿ ಚಿಕ್ಕ ಪ್ರಕಾಶಕರನ್ನು ಸಂಪೂರ್ಣ ನಾಶ ಮಾಡಹೊರಟದ್ದರ ಹಿಂದಿನ ಹುನ್ನಾರು ಯಾವುದು?...

    ಗ್ರಂಥ ಖರೀದಿ ಕೇವಲ ಸಾರ್ವಜನಿಕ ಗ್ರಂಥಾಲಯ ಇಲಾಖೆಯೊಂದರಿಂದಲೇ ನಡೆಯುತ್ತಿಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆ, ಮುಂದುವರಿಕೆ ಶಿಕ್ಷಣ ಯೋಜನೆಯಂಥ ಬೇರೆ ಬೇರೆ ಇಲಾಖೆಗಳೂ ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿವೆಯೆಂಬುದು ರಾಜಧಾನಿಯಿಂದ ಬಹುದೂರವಿರುವ ಲೇಖಕ - ಪ್ರಕಾಶಕರಿಗೆ ಗೊತ್ತಾಗುವುದಿಲ್ಲ. ಇತ್ತೀಚೆಗೆ ಬಹಿರಂಗಕ್ಕೆ ಬಂದ ವರದಿಯಂತೆ ಜಾಹೀರು ಪ್ರಕಟನೆ ನೀಡದೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ  ಪುಸ್ತಕ ಖ್ರೀದಿ ಪ್ರಕ್ರಿಯೆ ನಡೆದುಹೋದ ವಿಚಾರ ಕೇವಲ್ ಈ ವರ್ಷದಲ್ಲಿ ಮಾತ್ರವೇ ಘಟಿಸಿದ್ದೆಂದೂ ನಂಬಲಿಕ್ಕಾಗುವುದಿಲ್ಲ. ಆದ್ದರಿಂದ ಸರ್ಕಾರ ಯಾವ ಶಾಖೆಗಳ ಮೂಲಕವೇ ಅಥವಾ ಸರ್ಕಾರದ ಅನುದಾನ ಪಡೆದ ಸಂಸ್ಥೆಗಳ ಯಾವ ಯೋಜನೆಗಳ ಮೂಲಕವೇ ಪುಸ್ತಕ ಖರೀದಿ ಪ್ರಕ್ರ್ಯೆ ಆರಂಭವಾಗುವುದಿರಲಿ, - ಈ ರಾಜ್ಯದ ಮತ್ತು ಹೊರನಾಡಿನಲ್ಲಿ ಕೆಲಸ ಮಾಡುತ್ತಿರುವ ಕನ್ನಡ ಸಂಘ- ಸಂಸ್ಥೆಗಳ ಗಮನಕ್ಕೂ ವರುವಂತೆ ಸಾಕಷ್ಟು ಕಾಲಾವಕಾಶವಿಟ್ಟು ಜಾಹೀರು ಪ್ರಕಟನೆ ನೀದುವುದನ್ನೆ ಕಡ್ಡಾಯಗೊಳಿಸುವ ಮತ್ತು ನೀಡಿದ್ದಾರೋ - ಇಲ್ಲವೋಎಂವ ಬಗ್ಗೆ ಕಣ್ಗಾವಲಿಡುವ ವ್ಯವಸ್ಥೆ ಸರಕಾರದಿಂದಾಗಬೇಕು. ಪಾರದರ್ಶಜತೆಯ ಕೊರತೆ ಎಂಥ ಪ್ರಾಮಾಣಿಕ ಅಧಿಕಾರಿಯನ್ನೂ ಗುಮಾನಿಯಿಂದ ನೋಡುವಂತೆ ಮಾಡುತ್ತದೆ.

   ಇದಿಷ್ಟು ಸರ್ಕಾರೀ ಮಟ್ಟದ ಗ್ರಂಥ ಖರೀದಿ ಕುರಿತ ವಿಚಾರ ಆಯಿತು. ಇದರ ಹೊರತಾಗಿಯೂ ಕನ್ನಡ ಪುಸ್ತಕೋದ್ಯಮವನ್ನು ಬೆಳೆಸುವುದಕ್ಕೆ ಬೇಕಾದಷ್ಟು ದಾರಿಗಳಿವೆ. ಸಣ್ಣವು, ದೊಡ್ಡವು ಎಂಬ ವ್ಹೇದ ಮಾಡದೆ ಇಡೀ ರಾಜ್ಯದ ಪ್ರಕಾಶಕರನ್ನು ಸಮಾನ ಸೃಷ್ಟಿಯಿಂದ ಕಂಡು ಸರ್ಕಾರದ ಖರೀದಿ ನೆರವಿನ ಹಂಗಿಲ್ಲದೆ ಕನಿಷ್ಠ ಪಕ್ಷ ಒಂದು ಹೊಸ ಪುಸ್ತಕದ ೫೦೦ ಪ್ರತಿಗಳನ್ನಾದರೂ ತರಿಸಿಕೊಂಡು ಅದನ್ನು ಮಾರಾಟ ಮಾಡುವಂಥ ಒಂದು ಖಾಸಗಿ ಮಾರಾಟ ಜಾಲದ ತುರ್ತು ಅಗತ್ಯ ಕಾಣುತ್ತಿದೇನೆ. ಈ ಕಾರ್ಯದಲ್ಲಿ ರಾಜಧಾನಿತಲ್ಲಿರುವ ಗ್ರಂಥ ಪ್ರಕಾಶಕರು ಉದಾರ ಹೃದಯಿಗಳಂತೆ ನಡೆದುಕೊಳ್ಳುವ ಅಗತ್ಯವೂ ಇದೆ. ಗ್ರಾಮೀಣ ಭಾಗಗಳಲ್ಲಿ ಈಗಿತ್ತ ಬಹಳಷ್ಟು ಪ್ರಕಾಶಕರು ಹುಟ್ಟಿಕೊಳ್ಳುತ್ತಿದ್ದಾರೆ - ಒಂದೆರಡು ಪುಸ್ತಕಗಳನ್ನು ಹೊರತರುವಷ್ಟರಲ್ಲಿ ಸುಸ್ತಾಗಿ ಮತ್ತೆ ಆ ನಿಟ್ಟಿನಲ್ಲಿ ತಲೆಹಾಕುವುದನ್ನೇ ಬಿಡುತ್ತಾರೆ. ಸಣ್ಣ ಮೀನನ್ನು ತಿಂದೇ ದೊಡ್ಡ ಮೀನುಗಳು ಕೊಬ್ಬುವಂತೆ ಕೋಟ್ಯಾವಧಿ ಹಣ ತೊಡಗಿಸಿ ವರ್ಷಕ್ಕೆ ನೂರಾರು ಪುಸ್ತಕಗಳನ್ನು ಪ್ರಕಟಿಸುವ ಗ್ರಂಥೋದ್ಯಮಿಗಳು ಈ ಗ್ರಾಮಾಂತರ ಭಾಗದ ಪ್ರಕಾಶಕರಿಗೆ ತಿಳಿದೋ ತಿಳಿಯದೆಯೋ ಕುತ್ತಾಗಿ ಪರಿಣಿಮಿಸಿದ್ದಾರೆ. ಆ ಬಗೆಗಿನ ಹೆಚ್ಚಿನ ವಿವರಣೆಗೆ ಇದು ಸಂದರ್ಭವಲ್ಲ.

    ಕನ್ನಡ ಪುಸ್ತಕ ಪ್ರಾಧಿಕಾರವನ್ನು ಅಸ್ಥಿತ್ವಕ್ಕೆ ತರುವಾಗ ಯಾವ ಉದ್ದೇಶ ಸರ್ಕಾರದ ಮುಂದಿತ್ತೋ ಅದು ಈಡೇರಲಿಲ್ಲ ಎಂಬುದಾಗಿ ಸ್ವತಃ ಈ ಪ್ರಾದಿಕಾರ ಇಡೀ ರಾಜ್ಯದ ಸಣ್ಣ- ದೊಡ್ಡ ಪ್ರಕಾಶಕರೆಲ್ಲರಲ್ಲಿ ಸಮನ್ವಯವನ್ನು ಸಾಧಿಸಿ ನಾವು ಪ್ರಕಟಿಸಿದ ಒಂದು ಪುಸ್ತಕಕ್ಕೆ ಮಾರ್ಕೆಟಿನಲ್ಲಿ ಮರ್ಯಾದೆಯಿದೆ ಎಂಬ ಭಾವನೆಯನ್ನು ಮೂಡಿಸುವುದಾಗಿತ್ತು. ಯಾರೂ ಪ್ರಕಟಿಸಲು ಮುಂದಾಗದಿದ್ದಂಥ ವಿಭಾಗ ಇದ್ದರೆ ಅಂಥ ಗ್ರಂಥಗಳನ್ನು ಮಾತ್ರ ಪ್ರಕಟಿಸುವ ಹೊಣೆ ಪುಸ್ತಕ ಪ್ರಾಧಿಕಾರ ಹೊತ್ತುಕೊಳ್ಳಬಹುದೆಂಬ ತಿಳುವಳಿಕೆ ನೀಡಲಾಗಿತ್ತು. ಆದರೆ ವಾಸ್ತವದಲ್ಲಿ ಹಾಗಾಗಲಿಲ್ಲ. ಸರ್ಕಾರದ ಅನುದಾನದಿಂದ ಅದೂ ನಿರಂತರವಾಗಿ ಪುಸ್ತಕ ಪ್ರಕಟನೆಗೆ ತೊಡಗಿತು. ಖಾಸಗಿ ಪ್ರಕಾಶಕರಿಂದ ಕೊಳ್ಳುತ್ತಿದ್ದ ೩೦೦ ಪ್ರತಿಗಳ ಬದಲು ಬೇರೆಯದೇ ಆದ ನಿಯಮ ಜಾರಿಗೆ ಬಂತು. ಸರ್ಕಾರವು ಕೂಡ ಪುಸ್ತಕ ಪ್ರಾಧಿಕಾರಕ್ಕೆ ಆರಂಭದಲ್ಲಿ ನೀಡಿದ್ದ ಸ್ಥಾನಮಾನ ಹಾಗೂ ಅನುದಾನ ನೀಡದೇ ಹೋಯಿತು. ಹೀಗಾಗಿ ಯಾವ ಪುಸ್ತಕ ಪ್ರಾಧಿಕಾರದಿಂದ ಇಡೀ ರಾಜ್ಯದಲ್ಲಿ ಒಂದು ಭರವಸೆದಾಯಕ ಮಾರಾಟ ಜಾಲ ನಿರ್ಮಾಣವಾಗುತ್ತದೆಂದು ನಂಬಲಾಗಿತ್ತೋ ಆ ನಂಬಿಕೆಯೇ ನರಳುವಂತಾಯಿತು.

   ಈಗ ಈ ಜವಾಬ್ದಾರಿಯನ್ನು ಹೊರುವಲ್ಲಿ ಖಾಸಗಿ ಪ್ರಕಾಶಕರೇ ಮುಂದಾಗಬೇಕು . ಸಮಷ್ಟಿಹಿತದಿಂದ ಒಂದೇ ಬ್ಯಾನರಿನ ಅಡಿಯಲ್ಲಿ ಒಂದಾಗಬೇಕು. ಇಚ್ಚಾಶಕ್ತಿಯನ್ನು ದುಡಿಸಿಕೊಳ್ಳಬೇಕು. ನಿರ್ದಿಷ್ಟವೂ ನಿರ್ದುಷ್ಟವೂ ಆದ ಮಾರಾಟ ಯೋಜನೆಯೊಂದರ ಮೂಲಕ ಈ ರಾಜ್ಯದ ಯಾವ ಮೂಲೆಯಲ್ಲಿ ಒಂದು ಸಂಗ್ರಹ ಯೋಗ್ಯ ಹೊಸ ಪುಸ್ತಕ ಪ್ರಕಟವಾದರೂ ವಾರದೊಳಗೆ ಇಡೀ ನಾಡಿನ ಎಲ್ಲ ಮೂಲೆಗೂ ಪರಿಚಯಗೊಳ್ಳುವಂಥ - ಕೈಗೆಟಕುವಂಥ ವ್ಯವಸ್ಥೆ ಮೂಡಿ ಬರಲಿ ಎಂಬುದೇ ರಾಜಧಾನಿಯಿಂದ ೫೦೦ ಕಿ.ಮೀ. ದೂರದಲ್ಲಿರುವ ನನ್ನ ಎದೆಯಾಸೆ.

 

ಕೊನೆಯದಾಗೆ ಇನ್ನೊಂದು ಮಾತು. ಈ ಮಾತು ಸರಕಾರದ ಕೆ.ಎಸ್.ಟಿ. ನಿಯಮಕ್ಕೆ ಸಂಬಂಧಿಸಿದ್ದು, ಈ ನಿಯಮವನ್ನು ಪುಸ್ತಕ ಪ್ರಕಟಿಸಿ ಮಾರಾಟದಂಗಡಿ ತೆರೆದು ನಿತ್ಯವ್ಯವಹಾರ ಕುದುರಿಸುವ ಗ್ರಂಥೋದ್ಯಮಗಳಿಗೆ ಅನ್ವಯವಾಗಲಿ, ಬೇಡ ಅನ್ನುವುದಿಲ್ಲ. ಗ್ರಾಮೀಣ ಭಾಗಗಳಲ್ಲಿ ಅಪ್ಪಟ ಸಾಂಸ್ಕೃತಿಕ ಕಾಳಜಿಯಿಂದ, ತಮ್ಮ ಪರಿಸರದ ಲೇಖಕರು ಕಳೆದು ಹೋಗದಂತೆ ನೋಡಿಕೊಳ್ಳುವ ಉದ್ದೇಶದಿಂದ - ವರ್ಷಕ್ಕೆ ಎರಡೋ - ನಾಲ್ಕೋ ಪುಸ್ತಕಗಳನ್ನು ಕಷ್ಟಪಟ್ಟು ಹೊರತಂದು ಅಲ್ಲಿ ಇಲ್ಲಿ ಇಟ್ಟು (ಅಂದರೆ ಸ್ವಂತ ಮಾರಾಟ ಮಳಿಗೆಯನ್ನೇ ತೆರೆಯದೆ ಮತ್ತು ಯಾವುದೇ ನಿಯಮಿತ ಮಾರಾಟ  ವ್ಯವಸ್ಥೆ ಒಳಪಡದೇ ಇರುವ) ಒಂದು ಸಾವಿರ ಪ್ರತಿಗಳನ್ನು ಐದಾರು ವರ್ಷಗಳ ಕಾಲಾವಧಿಯಲ್ಲಿ ಮಾರಾಟ ಮಾಡುವ ಬಡಪಾಯಿ ಪ್ರಕಾಶಕರಿಗೂ ಈ ನಿಯಮ ಅಳವಡಿಸುವುದು ಎಷ್ಟು ಸರಿ? ... ಇದೊಂದು ಸರಕಾರಿ ಪ್ರಾಯೋಜಿತ ಸಾಂಸ್ಕೃತಿಕ ಅಪರಾಧವಲ್ಲವೆ? ಈ ರಾಜ್ಯದ ಅನೇಕ ಸಣ್ಣ ಪ್ರಕಾಶನ ಸಂಸ್ಥೆಗಳು ಕೇವಲ ಪುಸ್ತಕಗಳನ್ನಷ್ಟೇ ಪ್ರಕಟಿಸದೇ ಸಾಹಿತ್ಯ ಕಮ್ಮಟ, ಕವಿಗೋಷ್ಠಿ, ಬೀದಿನಾಟಕ, ಸ್ಪರ್ಧೆ - ಸಮಾರಂಭಗಳಂಥ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಜೊತೆಜೊತೆಗೆ ನಡೆಸಿಕೊಂಡು ಬಂದಿವೆ. ಶಾಶ್ವತ ಮಾರಾಟ ಮಳಿಗೆ ಇಟ್ಟುಕೊಳ್ಳದೆ ಸಾಂಸ್ಕೃತಿಕ ಕಾಳಜಿಯಿಂದ ಈ ಕ್ಷೇತ್ರದಲ್ಲಿ ಅಷ್ಟೊ ಇಷ್ಟೊ ಪ್ರಕಟ ಮಾಡುತ್ತಿರುವವರಿಗೆ ಈ ನಿಯಮ ಅನ್ವಯಿಸುವುದು - ಇಲಾಖೆಯ ಮೂಲಕ ಎತ್ತಿದೆ ಬೆತ್ತದಂತಿದೆ. 

 

  ಸಂಗ್ರಹ: "ಪುಸ್ತಕ" ಸ್ಮರಣ ಸಂಚಿಕೆ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ), ಬೆಂಗಳೂರು

Comments (0) >>
Write comment

busy