Home
Indina Pustakodyamada Gati Print
Written by KP Purnachandra Tejaswi   
ಕನ್ನಡ ಸಾಹಿತ್ಯ ನಿಜವಾಗಿಯೂ ಶ್ರೀಮಂತವಾಗಬೇಕೆಂದಿದ್ದರೆ, ಅದು ಈ ಪುರಸ್ಕಾರ, ಪ್ರಶಸ್ತಿ ಸರ್ಕಾರಿ ಅನುದಾನಗಳಿಂದ ಸಾಧ್ಯವೇ ಇಲ್ಲ. ಇವೆಲ್ಲಾ ಕನ್ನಡ ಭಾಷೆ ಸಾಯದಂತೆ ನೋಡಿಕೊಳ್ಳುವ ಪ್ರಯತ್ನವೇ ಹೊರತು, ಅದರ ವಿಕಾಸ ಇವುಗಳಿಂದ ಸಾಧ್ಯವಿಲ್ಲ. ಭಾಷೆ ಮತ್ತು ಸಾಹಿತ್ಯಗಳು ಬರಹಗಾರರ ಮತ್ತು ಓದುಗರ ನಡುವಿನ ಸಂವಹನ ಮತ್ತು ವಿನಿಮಯಗಳಿಂದ ಮಾತ್ರ ಬೆಳೆಯುತ್ತವೆ.

ನಮ್ಮ ಅತ್ಯುತ್ತಮ ಲೇಖಕರ ಅತ್ಯುತ್ತಮ ಕೃತಿಗಳು... ಸಹ ವರ್ಷಕ್ಕೆ ಒಂದು ಸಾವಿರ ಪ್ರತಿಗಳು ಖರ್ಚಾಗದ ಸ್ಥಿತಿಯಲ್ಲಿ ನಾವಿದ್ದೇವೆಂದರೆ ಕನ್ನಡಕ್ಕೆ ಯಾವ್ಯಾವ ಪ್ರಶಸ್ತಿಗಳು ಬಂದರೆ ಏನು ಪ್ರಯೋಜನ. ಹಾಗೆಂದು ಕನ್ನಡಿಗರನ್ನು ದೂರುವುದು ಖಂಡಿತಾ ತಪ್ಪು. ಈ ದುಃಸ್ಥಿತಿಗೆ ಮುಖ್ಯವಾಗಿ ಬರಹಗಾರರು, ಸರ್ಕಾರ ಮತ್ತು ಪ್ರಕಾಶಕರು ಈ ಮೂರು ಜನರೇ ಕಾರಣ. ಏಕೆಂದರೆ ಇವತ್ತು ಒಳ್ಳೆಯ ಪುಸ್ತಕಗಳು ನಿರಾಯಾಸವಾಗಿ ವರ್ಷಕ್ಕೆ  ಎರಡು ಸಾವಿರಕ್ಕೂ ಮಿಕ್ಕಿ ಖರ್ಚಾಗುವ ಕನ್ನಡ ಓದುಗರ ಸಮುದಾಯ ಇದೆ. ಆದರೆ ಬರಹಗಾರ ಇವರನ್ನು ಮುಟ್ಟುವ ಸಾಧ್ಯತೆಗಳೇ ಇಲ್ಲದಂತೆ ನಾವು ಮಾಡಿದ್ದೇವೆ. ಇವತ್ತು ಕನ್ನಡದಲ್ಲಿ ಪ್ರಕಟವಾಗುತ್ತಿರುವ ನಾಲ್ಕಾರು ನಿಯತಕಾಲಿಕಗಳು ಬಾಗಿಲು ಮುಚ್ಚಿದರೆ ಕನ್ನಡದ ಬರಹಗಾರರಿಗೆ ಓದುಗರನ್ನು ಮುಟ್ಟುವ ಎಲ್ಲ ಮಾರ್ಗಗಳು ಬಂದ್ ಆಗುತ್ತವೆ.

    ಹೇಗೆ ನಾನು ಮೇಲೆ ಹೇಳಿದ ಮೂರು ಜನರೂ ಈ ದುರಂತಕ್ಕೆ ಪಾಲುದಾರರೆಂದು ಒಂದೊಂದಾಗಿ ಈಗ ಪರ್ಯಾಲೋಚಿಸೋಣ. ನಮ್ಮ ಬರಹಗಾರರಲ್ಲಿ ಇವತ್ತು ಯಾರೂ ವೃತ್ತಿ ಬರಹಗಾರರಿಲ್ಲ ಎಂದರೆ ಪ್ರಗತಿಶೀಲ ಕಾಲದಲ್ಲಿ ಇದ್ದಂತೆ ಬರವಣಿಗೆಯಿಂದಲೇ ಬದುಕುತ್ತೇವೆಂದು ಹೊರಟವರು. ಇಲ್ಲ ಪಾರ್ಟ್ ಟೈಮ್ ಹಾಬೀ ಬರಹಗಾರರು. ನೂರಕ್ಕೆ ತೊಂಬತ್ತರಷ್ಟು ಜನ ಅಧ್ಯಾಪಕರು. ಇವರ ಓದುಗರೊಡನೆ ಸಂವಾದವೆಲ್ಲಾ ಸೆಮಿನಾರಗಳು, ಚರ್ಚಾಗೋಷ್ಠಿಗಳು, ಸಮ್ಮೇಳನಗಳು ಇಷ್ಟಕ್ಕೇ ಸೀಮಿತವಾಗಿರುತ್ತವೆ. ಅಲ್ಲಿರುವ ಹೆಚ್ಚು ಜನ ಸಾಹಿತ್ಯದ ವಿಶೇಷ ಅಭ್ಯಾಸಿಗಳು. ಸಮಾಜಕ್ಕೂ ಸುತ್ತಮುತ್ತಲಿನ ಪರಿಸರಿಕ್ಕೂ ಯಾವ ರೀತಿಯ ಸಾಂಗತ್ಯವೂ ಇಲ್ಲದ ವಿಚಿತ್ರ ಮಾನದಂಡಗಳನ್ನಿಟ್ಟುಕೊಂಡು ಸೃಜನಶೀಲತೆಯ ಬಗ್ಗೆ ಕೊರೆಯುತ್ತಾರೆ. ನಮ್ಮ ಬರಹಗಾರರಿಗೆ ಓದುಗರಿಂದ ಸಿಗುತ್ತಿರುವ ಫೀಡ್ ಬ್ಯಾಕ್ ಎಂದರೆ ಇದೆ. ಹೀಗಾಗಿ ಇವರು ರಚಿಸುವ ಕೃತಿಗಳನ್ನು ಪ್ರಕಟಿಸಲು ಯಾವ ಪ್ರಕಾಶಕನೂ ಮುಂದೆ ಬರುವುದಿಲ್ಲ. ಬರಹಗಾರರು ಕೊನೆಗೆ ತಮ್ಮ ಕೃತಿಗಳನ್ನು ತಾವೇ ಪ್ರಕಟಿಸಿ ಅದರ ಹಲವು ಪ್ರತಿಗಳನ್ನು ಗೌರವ ಪ್ರತಿಗಳಾಗಿ ಹಂಚಿ ಮಿಕ್ಕಿದ್ದನ್ನು ಅಟ್ಟದ ಮೇಲೆ ಎಸೆಯುತ್ತಾರೆ. ಇನ್ನು ಕೆಲವರು ಪುಸ್ತಕಗಳನ್ನು ಶೇಕಡಾ ಅರವತ್ತರಷ್ಟು ಕಡಿಮೆ ಬೆಲೆಗೆ ಯಾರಾದರೂ ವ್ಯಾಪಾರಿಗಳಿಗೆ ದಾಟಿಸಿ ಕೈ ತೊಳೆದುಕೊಳ್ಳುತ್ತಾರೆ. ಗೊಬ್ಬರವನ್ನೆಲ್ಲಾ ವ್ಯಾಪಾರಿಗಳು ಲೈಬ್ರರಿಯವರಿಗೆ ಶೇಕಡಾ ಮೂವತ್ತರಷ್ಟು ಲಂಚ ಕೊಟ್ಟು ವರ್ಗಾಯಿಸುತ್ತಾರೆ. ಹಾಗಾಗಿಯೇ ನಮ್ಮ ಲೈಬ್ರರಿಗಳೆಲ್ಲಾ ಅಕ್ಷರಶಃ ಗೊಬ್ಬರದ ಗುಂಡಿಗಳಾಗಿರುವುದು.

ಇದು ನಾವು ವಿವೇಚಿಸುತ್ತಿರುವ ಸಂಕೀರ್ಣ ಸಮಸ್ಯೆಯ ಒಂದು ಮುಖ ಅಷ್ಟೇ, ಬರಹಗಾರರಿಗೆ ಓದುಗರ ಅಭಿರುಚಿಯ ಅರಿವೇ ಇಲ್ಲ. ಅವರಿಗೆ ಮಾರುಕಟ್ಟೆಯ ಫೀಡ್‍ಬ್ಯಾಕ್ ಇಲ್ಲ ಎನ್ನುವುದು. ಹಾಗೆಂದ ಮಾತ್ರಕ್ಕೆ ಬರಹಗಾರರು ಓದುಗರ ಅಭಿರುಚಿಗೆ ತಕ್ಕಂತೆ ಕುಣಿಯಬೇಕೆ ಎಂದು ಅನೇಕರು ಆಕ್ಷೇಪಿಸುತ್ತಾರೆ. ನಾನು ಹಾಗೆ ಹೇಳುತ್ತಿಲ್ಲ. ಸೃಷ್ಟಿಕ್ರಿಯೆ  ನಾನು ಮೊದಲೇ ವಿವರಿಸಿರುವಂತೆ ಓದುಗರ ಮತ್ತು ಬರಹಗಾರರ ನಡುವಿನ ಸಂವಾದ, ಸಾಹಿತ್ಯ ಸೃಷ್ಟಿ ಇಬ್ಬರ ಪರಸ್ಪರ ಅರಿವಿನ ಅವತಾರ. ಭಾಷೆ ಒಬ್ಬ ಬರಹಗಾರನಿಗೆ ಆ ಭಾಷೆಯನ್ನು ಮಾತಾಡುವ ಜನಸಮುದಾಯದ ಅರಿವಾಗಿ ಕರಗತವಾಗಬೇಕು ಎಂದಷ್ಟೆ ನನ್ನ ಅಭಿಪ್ರಾಯ. ಇದನ್ನು ತಾಳಕ್ಕೆ ತಕ್ಕಂತೆ ಕುಣಿಯುವುದೆಂದೇ ಹೇಳುವುದಾದರೆ         ಯಾವ ಯಾವುದೋ ತಾಳಕ್ಕೆ ತಕ್ಕಂತೆ ಕುಣಿಯುವುದರ ಬದಲು ಈ ತಾಳವೇ ವಾಸಿ ಎಂದೆನ್ನಬಹುದು.

    ಇನ್ನು ಪ್ರಕಾಶಕರಲ್ಲಿ ನಾವು ಮೂರು ವರ್ಗವನ್ನು ಕಾಣಬಹುದು. ಮೊದಲನೆಯದು ಕನ್ನಡದ ಸೇವೆ ಮಾಡುತ್ತೇವೆ, ಸಾಹಿತ್ಯ ಸೇವೆ ಮಾಡುತ್ತೇವೆ ಎನ್ನುವ ಒಂದು ವರ್ಗದವರು. ಇವರಲ್ಲಿ ತುಂಬಾ ಪುಸ್ತಕಗಳನ್ನು ಪ್ರಕಟಿಸಿರುವ ದೊಡ್ಡ ದೊಡ್ಡ ಪ್ರಕಾಶಕರೂ ಇದ್ದಾರೆ. ಆದರೂ ಇವರನ್ನು ನಾವು ಹವ್ಯಾಸಿ ಪ್ರಕಾಶಕರೆಂದೇ ಕರೆಯಬಹುದು. ಏಕೆಂದರೆ ಇವರಿಗೇನೂ ಪುಸ್ತಕ ಪ್ರಕಟಿಸಿ ಲಾಭ ಮಾಡುವ ಆಕಾಂಕ್ಷೆ ಇಲ್ಲ. ತಮ್ಮ ಅಭಿರುಚಿಗೆ ಅನುಸಾರವಾಗಿ ಇವರು ತಮಗೆ ಉತ್ತಮ ಎಂದು ಕಂಡ ಪುಸ್ತಕಗಳನ್ನೆಲ್ಲಾ ಪ್ರಕಟಿಸುತ್ತಾರೆ. ಇವರೆಂದೂ ಮಾರಾಟದ ಬಗ್ಗೆ ಗಂಭೀರ ಪ್ರಯತ್ನ ಮಾಡುವುದಿಲ್ಲ. ಹಾಗಾಗಿ ಇವರಿಂದ ಲೇಖಕರಿಗೂ, ಮಾರುಕಟ್ಟೆಯ ಮಾಹಿತಿಗಳು ದೊರೆಯುವುದಿಲ್ಲ. ಇವರು ತಾವೂ ಉದ್ಧಾರವಾಗದೆ ಹಾಗೂ ತಮ್ಮ ನಂಬಿದವರನ್ನೂ ಉದ್ಧಾರ ಮಾಡದವರು. ಆದರೂ ಈವರೆಗೆ ಈ ವರ್ಗದ ಪ್ರಕಾಶಕರಿಂದ ಗಣನೀಯವಾದ ಕನ್ನಡ ಸಾಹಿತ್ಯ ಸೇವೆ ಆಗಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ.
   

ಎರಡನೆಯ ವರ್ಗ ಎಂದರೆ ಪಠ್ಯಪುಸ್ತಕಗಳನ್ನು ಪ್ರಕಾಶನ ಮಾಡುವ ಖದೀಮರದ್ದು. ಸಾಹಿತ್ಯಿಕ ಮೌಲ್ಯಗಳು ಎನ್ನುವುದು ಇವರಿಗೆ ಗೊತ್ತಿಲ್ಲದ ಶಬ್ದ. ಪಠ್ಯಪುಸ್ತಕಗಳಾಗುವಂಥ ಪುಸ್ತಕಗಳನ್ನು ಮಾತ್ರ ಪ್ರಕಟಿಸಿ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನೂ ಪಠ್ಯಪುಸ್ತಕ ಕಮಿಟಿಯನ್ನೂ ಲಂಚದ ಬಲೆಗೆ ಕೆಡವಿ ಪ್ರತಿವರ್ಷ ಒಬ್ಬೊಬ್ಬರೂ ತಮ್ಮ ಪ್ರಕಟಣೆಯ ಎಂಟು ಹತ್ತು ಪುಸ್ತಕಗಳು ವಿವಿಧ ತರಗತಿಗಳಿಗೆ ಪಠ್ಯವಾಗುವಂತೆ  ನೋಡಿಕೊಳ್ಳುತ್ತಾರೆ. ಒಬ್ಬೊಬ್ಬರೂ ಹತ್ತಾರು ಹೆಸರಿನ ಬೇನಾಮಿ ಪ್ರಕಾಶನ ಸಂಸ್ಥೆಗಳನ್ನು ನಡೆಸುತ್ತಾರೆ. ಸಾಧಾರಣವಾಗಿ ಇವರು ಗತಿಸಿದ ಲೇಖಕರ ಅಥವಾ ಹಳೆಗನ್ನಡದ ಸಂಗ್ರಹಗಳನ್ನೇ ಪ್ರಕಟಿಸುವುದು, ಬರಹಗಾರನ ಗೌರವಧನವನ್ನೂ ತಾವೇ ಹೊಡಕೊಳ್ಳಬಹುದು ಎನ್ನುವುದೊಂದೇ ಇದಕ್ಕೆ ಕಾರಣ.

    ಪಠ್ಯಪುಸ್ತಕದ ಈ ಕರಾಳ ಕಾಳ ವ್ಯವಹಾರಗಳ ಪರಿಚಯ ನನಗಾಗಿದ್ದು ನನ್ನ ಕರ್ವಾಲೋ ಕಾದಂಬರಿ ಪಿ.ಯು.ಸಿ.ಗೆ ಪಠ್ಯಪುಸ್ತಕವಾಗಿ ನಿಯಮಿಸಿದ್ದರಿಂದ. ವಿಜಯ ದೇವರಾಜೇ ಅರಸು ಅವರನ್ನು ಪಿ.ಯು.ಸಿ. ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದಾಗ ಅವರು ಪಠ್ಯಪುಸ್ತಕ ಸಮಿತಿಯ ಖದೀಮರನ್ನೆಲ್ಲಾ ಓಡಿಸಿ, ಅದನ್ನು ಪುನರ್ರೂಪಿಸಿದರು.
ಅದರಲ್ಲಿ ಅಧ್ಯಾಪಕರ ಪ್ರತಿನಿಧಿಗಳು, ಚಿದಾನಂದಮೂರ್ತಿ, ಜಿ.ಎಚ್. ನಾಯಕ್ ಮುಂತಾದ ಮರ್ಯಾದಸ್ತ ತಜ್ಞರಿದ್ದುದರಿಂದ ಈ ಖದೀಮ ಪ್ರಕಾಶಕರಿಗೆ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲಾಗಲಿಲ್ಲ. ಹಾಗಾಗಿ ಆಕಸ್ಮಿಕವಾಗಿ ಕರ್ವಾಲೋ ಪಠ್ಯಪುಸ್ತಕವಾಗಿದ್ದು. ಆದರೆ ಈ ಪ್ರಕಾಶಕರು ಐನೂರು ರೂಪಾಯಿ ಸಂಭಾವನೆ ಕೊಡಬಂದಾಗ ನಾನು ನ್ಯಾಯಬದ್ಧ ಸಂಭಾವನೆ ಕೇಳಿದೆ. ಇದರ ಪರಿಣಾಮ ನನಗೆ ಇಡೀ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಪ್ರಕಾಶಕನೂ ಸಿಕ್ಕಲಿಲ್ಲ. ಕೊನೆಗೆ ಅರಸುರವರೇ ಹೇಗೋ ದೆಹಲಿಯ ಒಬ್ಬ ಪ್ರಕಾಶಕನಿಂದ ಅದನ್ನು ಒಂದು ವರ್ಷ ಪ್ರಕಟಿಸಿದರು. ಆದರೆ ಮಾರನೇ ವರ್ಷ ಅರಸು ನಿವೃತ್ತರಾದ್ದರಿಂದ ಅದನ್ನು ಯಾರೂ ಪ್ರಕಟಿಸಲಿಲ್ಲ. ನಾವಾದರೂ ಪ್ರಕಟಿಸುತ್ತೇವೆಂದು ಕೇಳಿದ್ದಕ್ಕೆ ಇಲಾಖೆಯ ಅಧಿಕಾರಿಗಳು ನಲವತ್ತು ಸಾವಿರ ರೂಪಾಯಿ ಲಂಚ ಕೊಡಬೇಕೆಂದು ನಿರ್ಲಜ್ಜರಾಗಿ ಕೇಳಿದರು. ಅಲ್ಲಿಗೆ ನಾನೂ ಅದನ್ನು ಕೈಬಿಟ್ಟೆ. ನಾಲ್ಕು ವರ್ಷದಲ್ಲಿ ಮೂರು ವರ್ಷ ವಿದ್ಯಾರ್ಥಿಗಳು ಅಕ್ಷರಶಃ ಪಠ್ಯ ಪುಸ್ತಕವೇ ಇಲ್ಲದೆ ಪರೀಕ್ಷೆ ಕಟ್ಟಿದರು. ಮೇಷ್ಟರು ಏನು ಪಾಠ ಮಾಡಿದರೋ ಹುಡುಗರು ಏನು ಉತ್ತರ ಬರೆದರೋ ದೇವರಿಗೇ ಗೊತ್ತು. 

 

ತಂದೆ-ತಾಯಿಗಳಾಗಲಿ, ಶಾಸಕರಾಗಲಿ, ಸರ್ಕಾರವಾಗಲೀ ಇಂಥ ಭಯಾನಕ ಪರಿಸ್ಥಿತಿಯನ್ನು ಗಣನೆಗೆ ಸಹ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಮೂಲ ಕಾರಣ ಈ ಪಠ್ಯಪುಸ್ತಕ ಪ್ರಕಾಶಕರ ದುಷ್ಟಕೂಟ. ಇವರು ದುಡ್ಡಿನ ಬಲದಿಂದ ಇಂದು ಇಲಾಖೆಯ ಅಧಿಕಾರಿಗಳನ್ನು, ಪಠ್ಯಪುಸ್ತಕ ಸಮಿತಿಯವರನ್ನು ತಮ್ಮ ಮರ್ಜಿಗೆ ತಕ್ಕಂತೆ ಬದಲಾಯಿಸುವಷ್ಟು ಬಲಾಢ್ಯರಾಗಿದ್ದಾರೆ. ನಮ್ಮ ಶಾಲೆಗಳ ಪಠ್ಯಪುಸ್ತಕಗಳ ಶೋಚನೀಯ ಸ್ಥಿತಿಗೆ ಇವರೇ ಕಾರಣರು. ಶಾಲೆಯ ಮಕ್ಕಳಿಗೂ ಉತ್ತಮ ಕನ್ನಡ ಸಾಹಿತ್ಯ ಪರಿಚಯವಾಗುವಂತೆ ಮಾಡಿದ್ದಾರೆ. ಸದಾ ಭಿನ್ನಮತೀಯರ ಕಾಟದಲ್ಲಿ ತೊಳಲಾಡುವ ಸರ್ಕಾರಗಳು, ಯಾವುದೇ ಪೂರ್ವಪರಿಶ್ರಮ ಇಲ್ಲದೆ ಒಂದು ಭೂಷಣವಾಗಿ ಹುದ್ದೆಯನ್ನಲಂಕರಿಸುವ ಮಂತ್ರಿಗಳು, ಈ ಸರ್ಕಾರಗಳ ಹಂಗಾಮಿತ್ವವನ್ನರಿತ ಭ್ರಷ್ಟ ಅಧಿಕಾರಿಗಳು ಇವರೆಲ್ಲರಿಂದ ಉಂಟಾಗುವ ಗೊಂದಲದ ಪೂರ್ಣ ಸದುಪಯೋಗ ಈ ಪ್ರಕಾಶಕರು ಪಡಕೊಳ್ಳುತ್ತಿದ್ದಾರೆ.


    ಪ್ರಕಾಶಕರ ಮೂರನೆಯ ಗುಂಪು ಸ್ಕೀಮುಗಳ ಪ್ರಕಾಶಕರದ್ದು, ನವ ಸಾಕ್ಷರರಿಗೆ, ವಯಸ್ಕರ ಶಿಕ್ಷಣಕ್ಕೆ , ಲೈಬ್ರರಿಗೆ ಪುಸ್ತಕ ಕೊಳ್ಳಲಿಕ್ಕೆ ಎಂದೆಲ್ಲಾ ಜಾಗತಿಕ ಸಂಸ್ಥೆಗಳೂ ಕೇಂದ್ರ ಸರ್ಕಾರವೂ ಕೋಟ್ಯಂತರ ರೂಪಾಯಿಗಳನ್ನು ರಾಜ್ಯ ಸರ್ಕಾರಗಳಿಗೆ ಅನುದಾನವಾಗಿ ಕೊಡುತ್ತದೆ. ಇವು ಜಿಲ್ಲಾ ಪಂಚಾಯ್ತಿಗಳ ಮುಖಾಂತರ ಡಿ.ಇ.ಎಸ್.ಆರ್.ಟಿ. ಮತ್ತು ಇದೇ ರೀತಿಯ ಹಲವಾರು ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಘಟನೆಗಳ ಮುಖಾಂತರ ಪ್ರಕಾಶಕರಿಗೆ ವಿತರಣೆಯಾಗುತ್ತದೆ. ವಾಸ್ತವವಾಗಿ ಈ ಯಾವ ಸಂಘಟನೆಗಳೂ ಪ್ರಕಾಶಕರನ್ನು ಸಂಪರ್ಕಿಸಿ, ಪುಸ್ತಕಗಳನ್ನು ಆಹ್ವಾನಿಸುವುದೇ ಇಲ್ಲ. ಹಲವಾರು ಕೋಟಿ ರೂಪಾಯಿಗಳ ಈ ವ್ಯವಹಾರ ಸದ್ದುಗದ್ದಲವಿಲ್ಲದೆ ಒಳಗಿಂದೊಳಗೇ ನಡೆಯುತ್ತದೆ. ಅಧಿಕಾರಿಗಳು ಯಾವ ಯಾವ ಸ್ಕೀಮುಗಳು ಬಂದಿವೆಯೋ ಅವುಗಳಿಗನುಗುಣವಾಗಿ ಪುಸ್ತಕ ಸಿದ್ಧಪಡಿಸಿ ಒದಗಿಸುವಂತೆ ಪ್ರಕಾಶಕರಿಗೆ ಆಜ್ಞಾಪಿಸುತ್ತಾರೆ. ಪುಸ್ತಕಗಳ ಹೆಸರು ಮತ್ತು ವಿಷಯಗಳನ್ನೂ ಅವರೇ ತೀರ್ಮಾನಿಸಿ ಅಪ್ರೂ ಮಾಡುತ್ತಾರೆ. ಅನೇಕ ವೇಳೆ ಹಳೇ ಪುಸ್ತಕಗಳ ರಕ್ಷಾಪುಟಗಳನ್ನು ಕಿತ್ತು ಹೊಸ ಸ್ಕೀಮಿಗೆ ಹೊಂದುವಂಥ ತಲೆಬರಹ ಕೊಟ್ಟು ಸರಬರಾಜು ಮಾಡಿದ್ದಾರೆ. ಇಲ್ಲಿಗೆ ಸರಬರಾಜಾಗುವ ಪುಸ್ತಕಗಳೆಲ್ಲಾ ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂಥ ಪುಸ್ತಕಗಳು, ಈ ಸ್ಕೀಮುಗಳನ್ನು ಬಿಟ್ಟರೆ ಮತ್ತೆಲ್ಲೂ ಯಾರೂ ಮೂಸಿ ನೋಡದ ಪುಸ್ತಕಗಳು ಇವು.

 

ಕನ್ನಡಕ್ಕಾಗಿ ಹೋರಾಡುವ ಶ್ರೀ ಚಿದಾನಂದಮೂರ್ತಿಯಂಥವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಇವರೆಲ್ಲರ ಹೋರಾಟದ ಮುಖ್ಯ ಕೊರತೆ ಎಂದರೆ ಹೋರಾಟದ ಫಲವಾಗಿ ಸರ್ಕಾರ ಮಂಜೂರು ಮಾಡಿದ ಹಣ ಸದುಪಯೋಗವಾಗುತ್ತಿದೆಯೇ ಎಂದು ನೋಡಲು ಇವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಅಂತಿಮ ಫಲ ಸಾಹಿತ್ಯಕ್ಕಾಗಲಿ, ಸಂಸ್ಕೃತಿಗಾಗಲೀ ದೊರಕದೆ ಅಷ್ಟೂ ಢಕಾಯಿತರ ಪಾಲಗುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಕಾವಲು ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಅಕಾಡೆಮಿ ಎಷ್ಟೊಂದು ಸಂಸ್ಥೆಗಳಿವೆ. ಇವುಗಳು ಖರ್ಚು ಮಾಡುವ ಹಣಕ್ಕೆ ತಕ್ಕಷ್ಟು ಕನ್ನಡಕ್ಕೆ ಸಹಾಯ ಆಗಿದೆಯೇ? ಇವುಗಳನ್ನು ಈಗಿಂದೀಗಲೇ ಮುಚ್ಚಿದರೆ ಕನ್ನಡಕ್ಕೆ ಏನಾದರೂ ನಷ್ಟ, ತೊಂದರೆ ಉಂಟೆ? ಇವುಗಳ ಅನಿವಾರ್ಯ ವಲ್ಲದ ಕೇವಲ ಅಲಂಕಾರಗಳು ಮಾತ್ರವೇ? ಎಲ್ಲರೂ ಪ್ರಾಮಾಣಿಕವಾಗಿ ಯೋಚಿಸಬೇಕು.


    ಈ ದುರಂತ ನಾಟಕದ ಮೂರನೇ ಪಾತ್ರಧಾರಿ ಸರ್ಕಾರ. ಸಾಹಿತ್ಯ ಮತ್ತು ಸಂಸ್ಕೃತಿಗಳ ಅಭಿವೃದ್ಧಿಗೆ ಸರ್ಕಾರ ಹೇಗೆ ಸಹಾಯ ಮಾಡಬಹುದು, ಸರ್ಕಾರದ ಹಸ್ತಕ್ಷೇಪ ಯಾವ ರೀತಿ ಇರಬೇಕು ಎನ್ನುವ ಪರಿಜ್ಞಾನವೇ ಇಲ್ಲದೆ ಸರ್ಕಾರ ಧನಸಹಾಯ ಮಾಡುತ್ತಿದೆ. ಉದಾಹರಣೆಗೆ ಕನ್ನಡ ಪುಸ್ತಕ ಪ್ರಾಧಿಕಾರವನ್ನೇ ತೆಗೆದುಕೊಳ್ಳಿ. ಕನ್ನಡದ ಶ್ರೇಷ್ಠ ಬರಹಗಾರರ ಪುಸ್ತಕಗಳನ್ನು ಮುದ್ರಿಸಿ ಕಡಿಮೆ ಬೆಲೆಯಲ್ಲಿ ಜನಕ್ಕೆ ಒದಗಿಸುವ ಯೋಜನೆ ಹಾಗೂ ಪುಸ್ತಕಗಳ ಸಗಟು ವ್ಯಾಪಾರ ಈ ಎರಡನ್ನು ಬಿಟ್ಟು ಬೇರೊಂದು ಕೆಲಸ ಈ ಸಂಸ್ಥೆ ಈವರೆಗೆ ಮಾಡಿಲ್ಲ. ರಾಮಾಯಣ ದರ್ಶನಂ ಗ್ರಂಥವನ್ನು ಕೇವಲ ಹದಿನೈದು ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ. ನಾನು ಲೆಕ್ಕ ಹಾಕಿದಂತೆ ಈ ಪುಸ್ತಕದ ಬೈಂಡಿಂಗಿಗೇ ಹದಿನೈದು ರೂಪಾಯಿಗಳು ಖರ್ಚಾಗುತ್ತದೆ. ಪುಸ್ತಕಗಳನ್ನು ಈ ರೀತಿ ಪುಕ್ಕಟೆ ಎನ್ನುವಂಥ ದರದಲ್ಲಿ ಯಾವುದೋ ಸಂದರ್ಭಕ್ಕೆ ಯಾವಾಗಲಾದರೂ ಒಮ್ಮೆ ಅಥವಾ ಮತ್ತೇನಾದರೂ ಅಸಾಧಾರಣ ಕಾರಣವಿದ್ದರೆ ಮಾರಬಹುದೇ ವಿನಾ ಅದಕ್ಕಾಗಿಯೇ ಎಪ್ಪತ್ತೈದು ಲಕ್ಷ ತೂ. ವೆಚ್ಚದ ಒಂದು ಸಂಸ್ಥೆ ತೆರೆದು ಈ ರೀತಿ ಪುಸ್ತಕಗಳನ್ನು ಹಡಬಿಟ್ಟಿ ಒದಗಿಸುತ್ತಾ ಹೋಗುವುದರ ಪರಿಣಾಮವೇನು. ಸರ್ಕಾರ ಯೋಚಿಸಿದೆಯೇ? ಪುಸ್ತಕ ಪ್ರಾಧಿಕಾರ ಬರುವುದಕ್ಕೆ ಮೊದಲು ಯಾವ ತೊಂದರೆಯೂ ಇಲ್ಲದೆ ಸರ್ಕಾರಿ ಕಾರ್ಯದರ್ಶಿಯೇ ನಡೆಸಿಕೊಂದು ಹೋಗುತ್ತಿದ್ದ ಈ ಕೆಲಸವನ್ನು ಕ್ಯಾಬಿನೆಟ್ ದರ್ಜೆಯ ಅಧ್ಯಕ್ಷನೊಬ್ಬ ಎಪ್ಪತ್ತೈದು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕುಳಿತು ನಡೆಸಬೇಕೆ? ಸರ್ಕಾರ ಈ ದರದಲ್ಲಿ ಒದಗಿಸಿದ ಪುಸ್ತಕಗಳು ಹದಿನೈದೇ ದಿನದಲ್ಲಿ ಮಾರಾಟವಾದುದ್

 

ಎಲ್ಲಕ್ಕಿಂತ, ಈ ಬಗೆಯ ಸರ್ಕಾರಿ ಸಬ್ಸಿಡಿಗಳಿಂದ ಮಿಕ್ಕೆಲ್ಲೆ ರಂಗದಲ್ಲೂ ಆಗುತ್ತಿರುವ ಹಾನಿಯೇ ಪ್ರಕಾಶನ ಕ್ಷೇತ್ರದಲ್ಲೂ ಆಗುತ್ತದೆ. ಪುಸ್ತಕದ ಉತ್ಪಾದನೆ ವೆಚ್ಚ ತಾರಾಮಾರಿ ಏರುತ್ತಿರುವ ಈ ಸಂದರ್ಭದಲ್ಲಿ ಕನಿಷ್ಠ ಇನ್ನೂರೈವತ್ತು ರೂ. ಮಾರುಕಟ್ಟೆ ಬೆಲೆಯಾಗುವ ಪುಸ್ತಕವನ್ನು ಸರ್ಕಾರ ಹದಿನೈದು ರೂಪಾಯಿಗೆ ಮಾರಿದರೆ ಬೇರೆ ನ್ಯಾಯಬದ್ಧ ಬೆಲೆಯಲ್ಲಿ ಮಾರುಕಟ್ಟೆಗೆ ಬರುವ ಪುಸ್ತಕಗಳ ಮತ್ತು ಪ್ರಕಾಶಕರ ಕತೆ ಏನು. ನೂರು ಪೇಜಿನ ಎಕ್ಸರ್‌ಸೈಜ್ ಪುಸ್ತಕದ ಬೆಲೆ ಸಹ ಹತ್ತು ರೂಪಾಯಿಗಳಾಗಿರುವಾಗ ಸರ್ಕಾರದ ದಾಳಾಧೂಳಿ  ಧೋರಣೆ ದುಡ್ಡು ಕೊಟ್ಟು ಪುಸ್ತಕ ಕೊಳ್ಳುವ ಓದುಗರ ಮನೋಭಾವವನ್ನೇ ಬದಲಿಸುವುದಿಲ್ಲವೆ. ಯಾವುದೋ ವಿಶೇಷ ಸಂದರ್ಭಕ್ಕೆ ಸರ್ಕಾರ ಒಂದಿಷ್ಟು ಪುಸ್ತಕಗಳನ್ನು ಧರ್ಮಾರ್ಥ ಹಂಚಿದರೂ ನನಗೆ ಬೇಸರವಿಲ್ಲ. ಆದರೆ ಪುಸ್ತಕ ಪ್ರಾಧಿಕಾರದ ಅಧಿಕೃತ ಕೆಲಸವೇ ಇದಾದರೆ ಈ ಸಂಸ್ಥೆ ಕನ್ನಡ ಪ್ರಕಾಶನ ಉದ್ಯಮಕ್ಕೆ ಕುಠಾರಪ್ರಾಯವಾಗುವುದರಲ್ಲಿ ಸಂಶಯವಿಲ್ಲ.


    ಸರ್ಕಾರ ನಿಜವಾಗಿಯೂ ಕನ್ನಡ ಸಾಹಿತ್ಯಕ್ಕೆ ಸಹಾಯ ಮಾಡಬಹುದಾದ ಕ್ಷೇತ್ರವೆಂದರೆ ಪುಸ್ತಕ ಮಾರಾಟಕ್ಕೆ ಒಂದು ಅಂಗಡಿಗಳ ಜಾಲ ಒದಗಿಸುವುದು. ಈಗ ಇಡೀ ಕರ್ನಾಟಕದಲ್ಲಿ ಸಾಹಿತ್ಯದ ಪುಸ್ತಕಗಳನ್ನು ಮಾರುವ ಅಂಗಡಿಗಳು ಹದಿನಾಲ್ಕರ ಮೇಲಿಲ್ಲ, ಮಂಗಳೂರು, ಬೆಂಗಳೂರು, ಮೈಸೂರು, ಧಾರವಾಡ, ಶಿವಮೊಗ್ಗ ಇಷ್ಟು ಊರುಗಳನ್ನು ಬಿಟ್ಟರೆ ಕರ್ನಾಟಕದ ಮಿಕ್ಕ ಜಿಲ್ಲೆಗಳಲ್ಲಿ ಸಾಹಿತ್ಯದ ಪುಸ್ತಕ ಮಾರುವ ಅಂಗಡಿಗಳೇ ಇಲ್ಲ. ಕರ್ನಾಟಕದ ಎಲ್ಲ ತಾಲೂಕು ಕೇಂದ್ರಗಳ ಬಸ್ ಸ್ಟಾಂಡುಗಳಲ್ಲಾದರೂ ಸರ್ಕಾರ ಒಂದೊಂದು ಪುಟ್ಟ ಮಳಿಗೆ ತೆರೆದು ಆಸಕ್ತರಿಗೆ ಬಾಡಿಗೆಗೆ ಕೊಡಬಹುದು. ಇದರಿಂದ ನೂರಾರು ಜನರಿಗೆ ಉದ್ಯೋಗ ದೊರಕಿದಂತಾಗುತ್ತದೆ. ಒಂದು ಪುಸ್ತಕ ಒಂದೊಂದು ತಾಲ್ಲೂಕಿನಲ್ಲಿ ಐದೈದೇ ಖರ್ಚಾದರೂ ವರ್ಷಕ್ಕೆ ಎರಡು ಸಾವಿರ ನಿರಾಯಾಸವಾಗಿ ಖರ್ಚಾಗುತ್ತದೆ. ಇದರಿಂದ ಪ್ರಕಾಶಕರಿಗೂ ತನ್ಮೂಲಕ ಬರಹಗಾರರಿಗೂ ಹೊಸ ಚೈತನ್ಯ ತುಂಬಿದಂತಾಗುತ್ತದೆ. ಊರೂರಿಗೊಂದು ರಂಗಮಂದಿರ ಕಟ್ಟಿಸಲು ಓಡಾಡುತ್ತಿರುವ ಸರ್ಕಾರಕ್ಕೆ ಇದೇನೂ ದೊಡ್ಡ ಹೊರೆಯಾಗಲಾರದು.

 

ಇನ್ನು ಸರ್ಕಾರದ ಅನುದಾನಗಳಿಂದ ಸಾಹಿತ್ಯ ಸಂಸ್ಕೃತಿಗೆ ಮಾಡುತ್ತಿರುವ ಸಹಾಯದ ಬಗ್ಗೆ ಯೋಚಿಸಿ. ಅನೇಕ ವೇಳೆ ಸಂಸ್ಕೃತಿ ಮತ್ತು ಸಮಾಜದಲ್ಲಾಗುವ ಅನೇಕ ಕಲಾ ಮಾಧ್ಯಮಗಳು ಮತ್ತು ಸಂಸ್ಥೆಗಳು ತೊಂದರೆಗೆ ಸಿಕ್ಕಿಕೊಳ್ಳುತ್ತವೆ ಎನ್ನುವುದು ಸತ್ಯ. ಅಂಥ ಸಂದರ್ಭಗಳಲ್ಲಿ ಸರ್ಕಾರವಾಗಲೀ, ಕಲಾಭಿಮಾನಿಗಳಾಗಲಿ ಸಹಾಯ ಹಸ್ತ ನೀಡಬೇಕಾಗುತ್ತದೆ. ಆದರೆ ಈ ಅನುದಾನಗಳಿಗೆ ಒಂದು ಕಾಲಮಿತಿ ಇದ್ದು ಇವು ತಾತ್ಕಾಲಿಕವಾಗಿ ಇರಬೇಕೆ ಹೊರತು ಅನುದಾನದ ಮೇಲೆ ಹುಟ್ಟಿ ಬೆಳೆಯುವ ಸಂಸ್ಥೆಗಳನ್ನು ರೂಪಿಸುವುದಾದರೆ ಅದು ಅಪಾಯಕರ. ಪ್ರತಿವರ್ಷ ಸರ್ಕಾರಿ ಅನುದಾನಕ್ಕೆ ಕೈಯೊಡ್ಡಿ ಓಡಾಡುವ ಕಲಾವಿದರ ತಂಡವನ್ನು ರೂಪಿಸಿದಂತಾಗುತ್ತದೆ. ಇವರ ಆತ್ಮಗೌರವವನ್ನೇ ನಾಶಮಾಡಿ ನಾವು ಕಲೆ ಮತ್ತು ಸಂಸ್ಕೃತಿಗಳನ್ನು ಬೆಳೆಸಲು ಸಾಧ್ಯವೇ? ಅದೂ ನಮ್ಮ ರಾಜಕಾರಾಣಿಗಳಲ್ಲಿ ಎಂಥವರಿದ್ದಾರೆಂದರೆ ದುಡ್ಡಿಗಾಗಿ ಸರ್ಕಾರದ ಬಳಿ ಬರುವವರನ್ನು ಭಿಕ್ಷುಕನಂತೆಯೇ ನಡೆಸಿಕೊಳ್ಳುತ್ತಾರೆ. ಸರ್ಕಾರದ ಅನುದಾನ ಹೆಚ್ಚಿದಷ್ಟು ಭಟ್ಟಂಗಿಗಳ ಮತ್ತು ಭಿಕ್ಷುಕರ ನೂಕುನುಗ್ಗಲು ವಿಧಾನಸೌಧದಲ್ಲಿ ಶುರುವಾಗುತ್ತದೆ. ಇವರ ಕಲಾ ಪ್ರದರ್ಶನ ವಿದೇಶಿ ಗಣ್ಯರ ಮನರಂಜನೆಗೆ ಸಂಸ್ಕೃತಿ ಇಲಾಖೆ ತೋರಿಸುವ ಕೋತಿ ಕುಣಿತ, ಕರಡಿ ಕುಣಿತಗಳಾಗಿ ಮಾರ್ಪಡುತ್ತದೆ. ಆದ್ದರಿಂದಲೇ ಸರ್ಕಾರದ ಧನಸಹಾಯ ಯಾವತ್ತೂ ತಾತ್ಕಾಲಿಕವಾಗಿರಬೇಕೇ ಹೊರತು ಅದನ್ನೇ ಆಧಾರ ಮಾಡಿಕೊಂಡ ಕಲೆಯಾಗಲಿ, ಸಂಸ್ಥೆಯಾಗಲಿ ಸರ್ವನಾಶವಾಗುತ್ತದೆ.

 

ಒಮ್ಮೆ ರಂಗಾಯಣದ ಗೆಳೆಯರ ಆಹ್ವಾನದ ಮೇಲೆ ಅಲ್ಲಿಗೆ ಹೋಗಿದ್ದೆ, ಅಲ್ಲಿ ಮಾತನಾಡುತ್ತಿರುವಾಗ ಅಲ್ಲಿನ ಅನೇಕ ಕಲಾವಿದನನ್ನು ತಮ್ಮ ಭವಿಷ್ಯವೇನು ಎಂಬ ಚಿಂತೆ ಕಾಡುತ್ತಾ ಇದ್ದಂತೆ ಕಂಡಿತು. ಅನೇಕರು ಈ ಸಂಘಟನೆಗೆ ಮುಂದೊಂದು ದಿನ ಸಾಂಸ್ಥಿಕ ಸ್ವರೂಪ ಸಿಕ್ಕಿತೇನೋ ಎಂದು ಸೇರಿದವರಿದ್ದರು. ಅವರಲ್ಲಿ ಅನೇಕರು ವೃತ್ತಿ ವೈದ್ಯರೂ, ಇಂಜಿನೀಯರುಗಳೂ ಕೆಲಸ ಬಿಟ್ಟು ಬಂದವರಿದ್ದರು. ಸರ್ಕಾರಿ ಅನುದಾನವಿಲ್ಲದೆ ಬದುಕುವ ಸಾಧ್ಯತೆಗಳೇ ಇಲ್ಲದ ಒಂದು ದಾರಿ ಅವರು ಹಿಡಿದಂತೆ ಕಂಡಿತು. ಶ್ರೀ ಬಿ.ವಿ. ಕಾರಂತರು ಆಗ ರಾಜೀನಾಮೆ ಕೊಟ್ಟಿದ್ದರಿಂದ ಅವರು ನನಗೆ ಸಿಕ್ಕಲಿಲ್ಲ. ಆದರೆ ಅಲ್ಲಿದ್ದ ಕಲಾವಿದರಲ್ಲಿ ಕೆಲವರು, ಕಾರಂತರು ಇದು ಶಾಶ್ವತ ಸಂಸ್ಥೆಯಾಗುತ್ತೆಂದು ತಪ್ಪು ಮಾಹಿತಿ ಕೊಟ್ಟರೆಂದು ಕಾರಂತರನ್ನು ದೂರಿದರು. ಅವರು ಹಾಗೆ ಹೇಳಿದರೋ ಇಲ್ಲವೋ ಅಥವಾ ಅವರಿಗೂ ಈ ಕುರಿತು ತಪ್ಪು ಮಾಹಿತಿ ಕೊಟ್ಟಿದ್ದರೋ ಯಾರಿಗೆ ಗೊತ್ತು. ನನ್ನ ಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ. ರಾಜಕಾರಣಿಗಳಿಗೆ, ಮಂತ್ರಿಗಳಿಗೆ ಬೆಣ್ಣೆ ತಿಕ್ಕಿ ಬದುಕಬೇಕೆಂದಾದರೆ ನಾಟಕ ಕಲೆಯನ್ನು ತೆಗೆದು ಕಸದ ಬುಟ್ಟಿಗೆ ಎಸೆಯುವುದು ಒಳ್ಳೆಯದೆನಿಸಿತು. ಅವರಿಗೆ ಬದಲಾಗುತ್ತಿರುವ ನಾಗರೀಕತೆಯಲ್ಲಿ ವಿಡಿಯೋ, ಕಾಮಿಕ್ಸ್ ಮೊದಲಾದ ಕಲಾಭಿವ್ಯಕ್ತಿಯ ಹೊಸಹೊಸ ಪ್ರಕಾರಗಳು ಪ್ರವರ್ಧಮಾನಕ್ಕೆ ಬರುತ್ತಿರುವುದರ ಬಗ್ಗೆ ಹೇಳಿ, ಮಾರುಕಟ್ಟೆ ಇರುವ ಯಾವುದಾದರೂ ಹೊಸ ಹೊಸ ದಾರಿಗಳಲ್ಲಿ ಪ್ರಯೋಗ ನಡೆಸಿ ಅನುದಾನದಿಂದ ಮುಕ್ತರಾಗಿ ಎಂದು ಹೇಳಿದೆ. ಅವರಲ್ಲಿ ಬಹಳ ಜನಕ್ಕೆ ಬೇಜಾರಾಯ್ತು. ನಾಟಕ ಕಲೆಯಲ್ಲಿ ವಿಡಿಯೋ ಕಲೆಯಲ್ಲಿ ಆತ್ಮಸಾಕ್ಷಾರದ ಮಾರ್ಗವೆನ್ನುವಷ್ಟು ಗಂಭೀರವಾಗಿ ನಾಟಕ ಕಲೆಯನ್ನು ಪರಿಗಣಿಸಿದ್ದ ಅವರಿಗೆ ನನ್ನ ಮಾತು ಪಥ್ಯವಾಗಲಿಲ್ಲ. ಆಧುನಿಕ ರಂಗಭೂಮಿ ಬೇರೆಡೆಗಳಲ್ಲೆಲ್ಲಾ ಹೇಗೆ ಪ್ರವರ್ಧಮಾನಕ್ಕೆ ಬರುತ್ತಿದೆಯೆಂದು ಭಾವೋದ್ವಿಗ್ನರಾಗಿ ನನಗೆ ವಿವರಿಸಿದರು. ಆದರೆ ಅವರ ಕನಸಿಗೂ ಅವರು ಎದುರಿಸಬೇಕಾದ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿತ್ತು.

 

ಯಾವುದೇ ಸಂಸ್ಥೆಯಾಗಲಿ, ಕಲೆಯಾಗಲಿ ಅದು ಅನುದಾನದಿಂದಲೇ ಹುಟ್ಟಿದರೂ ಅದು ನಿಜವಾಗಿಯೂ ಆವತ್ತಿನ ಸಂಸ್ಕೃತಿಗೆ ಅರ್ಥಪೂರ್ಣವಾದದ್ದಾದರೆ ಅದು ಬೆಳೆಯುತ್ತಾ ಬಂದಂತೆ, ಅದಕ್ಕೆ ಅನುದಾನ ಅಗತ್ಯ ತಂತಾನೆ ಕಡಿಮೆಯಾಗುತ್ತಾ ಹೋಗಬೇಕು. ಅದು ಬಿಟ್ಟು ಹೆಚ್ಚುತ್ತಾ ಹೋದರೆ ಅದರ ಅರ್ಥ ಇಷ್ಟೇ. ಅದರ ಅಮೂಲ್ಯತೆಯನ್ನು ಕುರಿತು ಬೊಗಳೆ ಹೊಡೆಯುವರೆಲ್ಲಾ ಭ್ರಾಂತರು, ಇಲ್ಲವೇ ಪಕ್ಕಾ ಕಳ್ಳರು.

 

ಸಂಗ್ರಹ: "ಪುಸ್ತಕ" ಸ್ಮರಣ ಸಂಚಿಕೆ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ), ಬೆಂಗಳೂರು 

 

Comments (0) >>
Write comment

busy
 
Log In | Join Now
Request a book!